
ಬೆಂಗಳೂರು: ‘ಬೆಂಗಳೂರು ಟೆಕ್ ಶೃಂಗಸಭೆಗೆ ಬರುವ ಜಾಗತಿಕ ಪ್ರತಿನಿಧಿಗಳು ಪ್ರಯಾಣಿಸಬೇಕಾದ ಗುಂಡಿ ಬಿದ್ದ, ಕಸದಿಂದ ತುಂಬಿ ತುಳುಕುವ ರಸ್ತೆಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಮನವಿ ಮಾಡಿ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾಲೆಳೆದಿದ್ದಾರೆ.
‘ಪ್ರಿಯಾಂಕ ಖರ್ಗೆ ಅವರಿಗೆ ಆರ್ಎಸ್ಎಸ್ ಬಗ್ಗೆ ಟೀಕಿಸುವ ಹೊರತಾಗಿಯೂ ತಮಗೆ ಒಂದು ಖಾತೆಯ ಜವಾಬ್ದಾರಿ ಇದೆ ಎಂದು ಕಡೆಗೂ ನೆನಪಿಸಿಕೊಂಡಿರುವುದು ಸಂತೋಷ’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘ಕಳೆದ ಎರಡೂವರೆ ವರ್ಷಗಳಿಂದ ಈ ನಾಲಾಯಕ್ ಸರ್ಕಾರ ಬೆಂಗಳೂರಿನ ಮೂಲಸೌಕರ್ಯವನ್ನು ಹಾಳು ಮಾಡಿದೆ. ಟ್ರಾಫಿಕ್ ಸಮಸ್ಯೆ ಉಲ್ಬಣಗೊಳಿಸಿದೆ. ಹೂಡಿಕೆದಾರರನ್ನು ಮತ್ತು ನವೋದ್ಯಮಿಗಳನ್ನು ಹೆದರಿಸಿ, ಬೆದರಿಸಿ, ಅವಮಾನ ಮಾಡಿ ಬೆಂಗಳೂರಿನ ವರ್ಚಸ್ಸಿಗೆ, ಜಾಗತಿಕ ಬ್ರ್ಯಾಂಡ್ಗೆ ಧಕ್ಕೆ ತಂದಿದೆ’ ಎಂದು ಅಶೋಕ ದೂರಿದ್ದಾರೆ.
‘ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗಿಯಾಗಲು ವಿಶ್ವದ ತಂತ್ರಜ್ಞಾನ ಲೋಕದ ದಿಗ್ಗಜರು ಬೆಂಗಳೂರಿಗೆ ಬರುವ ಮುನ್ನ ಇಲ್ಲಿನ ರಸ್ತೆಗಳನ್ನು ಸರಿಪಡಿಸಿ, ನಮ್ಮ ನಗರವನ್ನು ಮತ್ತೊಂದು ಸುತ್ತಿನ ಅವಮಾನದಿಂದ ಉಳಿಸಲಿ ಎನ್ನುವುದೇ ಜನರ ನಿರೀಕ್ಷೆ’ ಎಂದು ಹೇಳಿದ್ದಾರೆ.
‘ಬೆಂಗಳೂರು ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ನಗರದ ಕೆಟ್ಟ ಸ್ಥಿತಿಯಿಂದ ನಮ್ಮ ಬೆಂಗಳೂರು ನಗರಕ್ಕೆ ಮತ್ತೊಂದು ಜಾಗತಿಕ ಮುಜುಗರವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಗ್ಯಾರಂಟಿ ನೀಡುತ್ತದೆಯೇ’ ಎಂದೂ ಪ್ರಶ್ನಿಸಿದ್ದಾರೆ.
‘ನಮಸ್ತೆ ಟ್ರಂಪ್ಗಾಗಿ ಟಾರ್ಪಲ್ ಮುಚ್ಚಿಟ್ಟ ಪರಿಸ್ಥಿತಿ ಇಲ್ಲ’
‘ನಮಸ್ತೆ ಟ್ರಂಪ್’ಗಾಗಿ ಗುಜರಾತಿನ ಅಹಮದಾಬಾದ್ನ ಅವ್ಯವಸ್ಥೆಗಳಿಗೆ ಬಡತನಕ್ಕೆ ಕಸದ ಕೊಂಪೆಗಳಿಗೆ ಟಾರ್ಪಲ್ ಹಾಕಿ ಮುಚ್ಚಿಟ್ಟಿದ್ದಂಥ ಪರಿಸ್ಥಿತಿ ಬೆಂಗಳೂರಿನಲ್ಲಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಶೋಕ ಅವರ ಹೇಳಿಕೆಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ತಿರುಗೇಟು ನೀಡಿರುವ ಅವರು ‘ಜಿ 20 ಶೃಂಗಸಭೆಗಾಗಿ ದೆಹಲಿಯ ಬಡವರಿಗೆ ದಿಗ್ಬಂಧನ ವಿಧಿಸಿ ಬಡವರನ್ನು ಬಡತನವನ್ನು ಬಂಧನದಲ್ಲಿ ಇಟ್ಟಿದ್ದಂತಹ ದುಃಸ್ಥಿತಿ ಬೆಂಗಳೂರಿಗೆ ಬಂದಿಲ್ಲ. ಛತ್ ಪೂಜೆಗಾಗಿ ನರ್ಮದಾ ನದಿಯ ಪಕ್ಕದಲ್ಲಿ ಫಿಲ್ಟರ್ ನೀರಿನ ಕೊಳ ನಿರ್ಮಿಸಿ ನರ್ಮದಾ ನದಿಯ ಅವ್ಯವಸ್ಥೆಯನ್ನು ಮರೆಮಾಚಿದಂಥ ದುಃಸ್ಥಿತಿ ನಮಗೆ ಒದಗಿ ಬಂದಿಲ್ಲ’ ಎಂದು ಹಂಗಿಸಿದ್ದಾರೆ. ‘ಬೆಂಗಳೂರಿನ ಮಹತ್ವದ ಬಗ್ಗೆ ಬಿಜೆಪಿಯವರಿಗೆ ಅರಿವಿಲ್ಲದಿರಬಹುದು. ಆದರೆ ಮರ್ಸಿಡಿಸ್ ಬೆಂಜ್ನ ಸಿಇಒ ಅವರಿಂದ ಹಿಡಿದು ದೇಶದ ಹೂಡಿಕೆದಾರರವರೆಗೂ ಈ ನಗರದ ಬಗ್ಗೆ ಅರಿವಿದೆ. ಜಾಗತಿಕ ಸ್ಟಾರ್ಟ್ ಅಪ್ ಇಕೊ ಸಿಸ್ಟಂ ಸೂಚ್ಯಂಕದಲ್ಲಿ ಬೆಂಗಳೂರು 14ನೇ ಸ್ಥಾನಕ್ಕೆ ಏರಿರುವುದು ನಮ್ಮ ಕಾರ್ಯವೈಖರಿಗೆ ಹಿಡಿದ ಕನ್ನಡಿ’ ಎಂದಿದ್ದಾರೆ. ‘ಅಶೋಕ ಅವರು ಶಾಖೆಗೆ ಹೋಗಿ ದೊಣ್ಣೆ ಹಿಡಿಯುವುದನ್ನು ಬಿಟ್ಟು ಜಗತ್ತಿನ ಆಗುಹೋಗುಗಳ ಬಗ್ಗೆ ಬೆಂಗಳೂರಿನ ಹೆಗ್ಗಳಿಕೆಯ ಬಗ್ಗೆ ತಿಳಿಯುವ ಪ್ರಯತ್ನ ನಡೆಸಿದ್ದರೆ ಈ ರೀತಿಯ ಅಪ್ರಬುದ್ಧ ಹೇಳಿಕೆ ನೀಡುತ್ತಿರಲಿಲ್ಲ’ ಎಂದೂ ತಿವಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.