ಮೈಸೂರು: ‘ನವೀನ್ ಸುಖಾಸುಮ್ಮನೆ ಪೋಸ್ಟ್ ಹಾಕಿದ್ದಾನಾ ಸಿದ್ದರಾಮಯ್ಯನವರೇ? ಜನ್ಮಾಷ್ಟಮಿಯ ದಿನ ನಿಮ್ಮ ಸಾಬಣ್ಣ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿ ಪ್ರಚೋದನೆ ನೀಡಿದಾಗ ಹಿಂದೂಗಳು ಯಾಕೆ ಬೀದಿರಂಪ ಮಾಡಲಿಲ್ಲ’ ಎಂದು ಸಂಸದ ಪ್ರತಾಪಸಿಂಹ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಟ್ವೀಟ್ ಮಾಡಿ, ‘ಒಂದು ವೇಳೆ ಪ್ರವಾದಿ ಮಹಮದ್ ಅವರ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ ನವೀನ್ನ ಶೀಘ್ರ ಬಂಧನವಾಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ. ಗಲಭೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಗಲಭೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತೇನೆ’ ಎಂದಿದ್ದರು.
ಇದಕ್ಕೆ ಟ್ವಿಟರ್ನಲ್ಲೇ ತಿರುಗೇಟು ನೀಡಿರುವ ಪ್ರತಾಪಸಿಂಹ, ‘ಹೌದು ಸಾರ್! 2015ರಲ್ಲಿ ಮೈಸೂರಿನ ರಾಜು ಹತ್ಯೆಯಾದಾಗಲೇ ನೀವು ಕಠಿಣ ಕ್ರಮ ಕೈಗೊಂಡಿದ್ದರೆ ಡಜನ್ಗೂ ಹೆಚ್ಚು ನಮ್ಮ ಕಾರ್ಯಕರ್ತರ ಜೀವ ಉಳಿಯುತಿತ್ತು. ಅಂದಹಾಗೆ; ನವೀನ ವಿರುದ್ಧ ಕೇಸು ಕೊಟ್ಟಿದ್ದು ಸಂಜೆ 6 ಗಂಟೆ ಬಳಿಕ, 7.30ರೊಳಗೆ ಪೊಲೀಸರ ಸುಪರ್ದಿನಲ್ಲಿದ್ದ. ಇದು ಶೀಘ್ರವಲ್ಲವೇ? ಅಥವಾ ಮುಸಲ್ಮಾನರ ಬೇಡಿಕೆಯಂತೆ ಬಂಧಿಸಿ ಕೈಗೆ ಕೊಡಬೇಕಿತ್ತೇ?’ ಎಂದು ಕೇಳಿದ್ದಾರೆ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.