ADVERTISEMENT

ಮೈಸೂರು ಜಿಲ್ಲೆ ಪ್ರವೇಶಿಸಿದ ಭಾರತ್‌ ಜೋಡೊ ಯಾತ್ರೆಗೆ ಅಭೂತಪೂರ್ವ ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 16:00 IST
Last Updated 1 ಅಕ್ಟೋಬರ್ 2022, 16:00 IST
   

ಮೈಸೂರು: ರಾಜ್ಯದಲ್ಲಿ ಸಂಚರಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ’ ಯಾತ್ರೆಯು ಶನಿವಾರ ಬೆಳಿಗ್ಗೆ ಮೈಸೂರು ಜಿಲ್ಲೆ ಪ್ರವೇಶಿಸಿತು. ಸಾವಿರಾರು ಕಾರ್ಯಕರ್ತರ ಜಯಘೋಷಗಳ ನಡುವೆ ಸಂಚರಿಸಿತು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತವರಿನಲ್ಲಿ ನಡೆದ ಯಾತ್ರೆಯಲ್ಲಿ ಅವರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್‌ ಬೆಂಬಲಿಗರು ಕೂಡ ಚನ್ನಪಟ್ಟಣ, ಕನಕಪುರ ಮೊದಲಾದ ಕಡೆಗಳಿಂದ ಬಂದಿದ್ದರು.

ಬೆಳಿಗ್ಗೆ 7.30ರ ಸುಮಾರಿಗೆ ಚಾಮರಾಜನಗರ ಜಿಲ್ಲೆ ಬೇಗೂರು ಬಳಿಯಿಂದ ಆರಂಭವಾದ 2ನೇ ದಿನದ ಯಾತ್ರೆಯು, ಬೆಳಿಗ್ಗೆ 9ಕ್ಕೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಎಲಚಗೆರೆ ಬೋರೆ ಗೇಟ್ ಬಳಿಗೆ ತಲುಪಿದಾಗ ಅಲ್ಲಿ ಜಿಲ್ಲೆಯ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ನೀಡಿದರು.

ADVERTISEMENT

ಬೆಳಿಗ್ಗೆ 11ರ ಸುಮಾರಿಗೆ ಕಳಲೆ ಗ್ರಾಮ ತಲುಪಿದತು. ಯಾತ್ರಿಗಳು, ಕಳಲೆ ಗೇಟ್‌ ಬಳಿ ತಾತ್ಕಾಲಿಕ ಟೆಂಟ್‌ನಲ್ಲಿ ವಿಶ್ರಾಂತಿ ಪಡೆದರು. ಸಂಜೆ 4.30ರ ಸುಮಾರಿಗೆ ಕಳಲೆ ಗೇಟ್‌ನಿಂದ ಪಾದಯಾತ್ರೆ ಆರಂಭಗೊಂಡಿತು. ಸಂಜೆ 5ಕ್ಕೆ ನಂಜನಗೂಡಿನ ಹುಲ್ಲಹಳ್ಳಿ ವೃತ್ತಕ್ಕೆ ಆಗಮಿಸಿದಾಗಲೂ ಅದ್ದೂರಿ ಸ್ವಾಗತ ಸಿಕ್ಕಿತು. ಸಂಜೆ 6.30ಕ್ಕೆ ಚಿಕ್ಕಯ್ಯನಛತ್ರದಲ್ಲಿ ಕಾರ್ನರ್ ಮೀಟಿಂಗ್ ಜೊತೆ ಪಾದಯಾತ್ರೆ ಮುಕ್ತಾಯಗೊಂಡಿತು. ತಾಂಡವಪುರದ ಎಂ.ಐ.ಟಿ. ಕಾಲೇಜಿನ ಎದುರಿನ ಟೆಂಟ್‌ನಲ್ಲಿ ವಾಸ್ತವ್ಯ ಹೂಡಿರುವ ರಾಹುಲ್, ಅ.2ರಂದು ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಮೈಸೂರಿನತ್ತ ಪಾದಯಾತ್ರೆ ಮುಂದುವರಿಸಲಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.