ಬೆಂಗಳೂರು: ಕೊರೊನಾ ಜಗತ್ತಿಗೇ ಅಂಟಿದ ಮಾರಿಯಾಗಿದ್ದು, ಇದರ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಸರ್ಕಾರಗಳಿಗೆ ತಬ್ಲೀಗ್ ಜಮಾತ್ನವರು ಸಹಕಾರ ನೀಡದೆ ಇರುವುದು ಯಾಕಾಗಿ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಈ ಸಂಬಂಧ ಸೋಮವಾರ 13 ಪ್ರಶ್ನೆಗಳನ್ನು ಒಳಗೊಂಡ ಹೇಳಿಕೆ ಬಿಡುಗಡೆ ಮಾಡಿದ್ದು, ‘ತಬ್ಲೀಗ್ ಜಮಾತ್ನ ಮುಖ್ಯಸ್ಥ ಮೌಲಾನಾ ಸಾದ್ ಕಾಂಧ್ವಾಲಿ ಅವರೇ ಕೊರೊನಾ ಪರೀಕ್ಷೆಗೆ ಒಳಪಡುವುದಿಲ್ಲ ಎಂದು ಹೇಳಿರುವುದರಿಂದ ಇಡೀ ಸಮುದಾಯಕ್ಕೇ ಕೆಟ್ಟ ಸಂದೇಶ ರವಾನೆಯಾದಂತಾಗಿದೆ‘ ಎಂದು ಹೇಳಿದ್ದಾರೆ.
‘ನಿಜಾಮುದ್ದೀನ್ ಮತ್ತು ಅಜ್ಮೀರ್ಗಳಲ್ಲಿ ನಡೆದ ತಬ್ಲೀಗ್ ಜಮಾತ್ಸಮಾವೇಶದಲ್ಲಿ ಪಾಲ್ಗೊಂಡವರೆಲ್ಲ ಸಮಾಜದಲ್ಲಿ ತಲೆಮರೆಸಿಕೊಂಡು ಓಡಾಡದೆ ತಪಾಸಣೆಗೆ ಒಳಗಾಗಬೇಕು, ಬುದ್ಧಿಜೀವಿಗಳು ಇನ್ನಾದರೂ ತಮ್ಮ ಮೌನದಿಂದ ಹೊರಬಂದು ಈ ಸಮುದಾಯದವರಿಗೆ ಮನವರಿಕೆ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.
‘ಕೋವಿಡ್–19 ಸಮರ ಸೇನಾನಿಗಳ ಮೇಲೆ ದಾಳಿ ನಡೆಸುತ್ತಿರುವುದು ಏಕೆ? ಪಾದರಾಯನಪುರದಲ್ಲಿ ಗಲಭೆ ಎಬ್ಬಿಸಿದ ಮಂದಿ ಟಿಪ್ಪುನಗರಕ್ಕೂ ಅದನ್ನು ವಿಸ್ತರಿಸಿದ್ದು ಏಕೆ? ಮುಖ್ಯಮಂತ್ರಿ ಮಾತಿಗೂ ಬೆಲೆ ಕೊಡುತ್ತಿಲ್ಲ ಏಕೆ? ಇತರ ಸಮುದಾಯಗಳಲ್ಲಿನ ಅನಕ್ಷರಸ್ಥರೂ ಹೀಗೆ ಸಹಕಾರ ನೀಡದೆ ಇದ್ದಾರೆಯೇ? ಬಡ ಕಾರ್ಮಿಕರು, ಕೂಲಿಗಳನ್ನು ಕಂಡು ತಬ್ಲೀಗ್ ಸದಸ್ಯರಿಗೆ ಮರುಕ ಉಂಟಾಗುತ್ತಿಲ್ಲವೇ?’ ಎಂದು ಪ್ರಶ್ನಿಸಿರುವ ಅವರು, ಇನ್ನು ಮುಂದೆ ಜಿಲ್ಲೆಗಳ ಗಡಿಗಳಲ್ಲಿ ಸರಿಯಾದ ಕಾವಲು ಹಾಕಿ ತಬ್ಲೀಗ್ ಸದಸ್ಯರುಕ್ವಾರಂಟೈನ್ಗೆ ಒಳಗಾಗುವಂತೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.