ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳ ಸತ್ಯಾಸತ್ಯತೆ ಮತ್ತು ನೈಜತೆಯ ವರದಿ ಪಡೆಯಲು ಪಕ್ಷದಿಂದ ನಿಯೋಗ ಕಳುಹಿಸಲು ಕೆಪಿಸಿಸಿ ನಿರ್ಧರಿಸಿದೆ.
ಈ ನಡುವೆ, ಕರಾವಳಿಯಲ್ಲಿ ನಡೆಯುವ ಎಲ್ಲಾ ಸಂಘರ್ಷಗಳಿಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ ಎಂದು ವಾಗ್ದಾಳಿ ನಡೆಸಿರುವ ಬಿಜೆಪಿ, ಕರಾವಳಿ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆದಾಗ ಮೌನವಾಗಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ ಎಂದು ವ್ಯಂಗ್ಯವಾಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ, ‘ಡಿ.ಕೆ.ಶಿವಕುಮಾರ್ ಅವರೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ದಾಳಿ ನಡೆಸಿದ ಮತಾಂಧರ ಕೇಸು ವಾಪಸ್ಸು ಪಡೆದು ಮತಾಂಧರಿಗೆ ಕಾನೂನಿನ ಭಯ ಇಲ್ಲದ ಹಾಗೆ ಮಾಡಿದ್ದು ನೀವೇ ಅಲ್ವಾ’ ಎಂದು ಪ್ರಶ್ನಿಸಿದೆ.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆಯುತ್ತಿದೆ. ಆ ಪ್ರದೇಶದಲ್ಲಿ ನಿಷೇಧಿತ ಪಿಎಫ್ಐ ಭಯೋತ್ಪಾದನಾ ಸಂಘಟನೆ ಭಯದ ವಾತಾವರಣ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಅವರನ್ನು ಹತ್ತಿಕ್ಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದೆ. ಮುಸ್ಲಿಂ ಮತ ಬ್ಯಾಂಕ್ಗಾಗಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸುತ್ತಿದೆ’ ಎಂದು ಕಿಡಿಕಾರಿದೆ.
‘ಬೆಂಗಳೂರಿನ ಬಳಿಕ ಅತಿ ಹೆಚ್ಚು ತೆರಿಗೆ ಪಾವತಿಸುವ ಜಿಲ್ಲೆ ಕರಾವಳಿಯ ಅವಳಿ ಜಿಲ್ಲೆಗಳು. ಶೈಕ್ಷಣಿಕವಾಗಿ ಹಾಗೂ ಅರ್ಥಿಕವಾಗಿ ಮುಂದುವರಿದಿದ್ದು, ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕೀಯದ ವಿರುದ್ಧ ದೃಢವಾಗಿ ನಿಂತ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ನಡೆಸಿ ಕರಾವಳಿಯ ಶಾಂತಿಯನ್ನು ಹಾಳುಗೆಡವುತ್ತಿದೆ. ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕೀಯದಿಂದ ಕರಾವಳಿಯ ನೆಮ್ಮದಿ ಹಾಳಾಗಿದೆ’ ಎಂದು ಬಿಜೆಪಿ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.