ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕರ್ನಾಟಕದ ಬಿಜೆಪಿ ಸರ್ಕಾರದ ಪತನಕ್ಕೆ ಮುನ್ನುಡಿ ಆಗುತ್ತದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೇಶ ಮತ್ತು ಕರ್ನಾಟಕದಲ್ಲಿ ಬದಲಾವಣೆ ಆಗುವುದು ಗೋಡೆ ಮೇಲಿನ ಬರಹದಷ್ಟೆ ಸ್ಪಷ್ಟವಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ನಾಲಾಯಕ್ ಸರ್ಕಾರ ಬದಲಾಯಿಸಲು ಜನ ಕಾಯುತ್ತಿದ್ದಾರೆ’ ಎಂದರು.
‘ಸಚಿವರು ಮುಖ್ಯಮಂತ್ರಿ ಮೇಲೆ, ಮುಖ್ಯಮಂತ್ರಿ ಸಚಿವರ ಮೇಲೆ ಆರೋಪಿಸುತ್ತಿದ್ದಾರೆ. ರಾಜ್ಯದ ಸಚಿವರೊಬ್ಬರು ಕೇಂದ್ರದ ಮೇಲೆ ದೂರಿದ್ದಾರೆ. ಇಲ್ಲಿನ ಮಂತ್ರಿಗಳು ನಾಲಾಯಕ್ ಎಂದು ಕೇಂದ್ರದವರು ಹೇಳುತ್ತಿದ್ದಾರೆ. ಹೀಗಾಗಿ, ಸತೀಶ ಜಾರಕಿಹೊಳಿ ಗೆಲುವಿನ ಬಳಿಕ ಈ ಸರ್ಕಾರ ತಾನಾಗಿಯೇ ಮತ್ತು ತನ್ನ ತಪ್ಪಿನಿಂದಾಗಿಯೇ ಪತನಗೊಳ್ಳುತ್ತದೆ. ಬಳಿಕ ಜನರ ಮತಗಳಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ’ ಎಂದು ತಿಳಿಸಿದರು.
‘ಅವರ ಪಕ್ಷದವರೇ ಮುಖ್ಯಮಂತ್ರಿ ಹಾಗೂ ಅವರ ಪುತ್ರನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಂದಲೇ ನಾಯಕತ್ವ ಬದಲಾವಣೆ ಆಗುತ್ತದೆ. ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ಹೀಗಾಗಿ ಈ ಸರ್ಕಾರ ಅಧಿಕಾರದಲ್ಲಿ ಇರಬಾರದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.