ಬೆಂಗಳೂರು: ‘ಬ್ರಾಹ್ಮಣರೆಲ್ಲರೂ ಆರ್ಥಿಕವಾಗಿ ಬಲಿಷ್ಠರು ಎಂಬ ತಪ್ಪು ಕಲ್ಪನೆಯನ್ನು ಬಿಜೆಪಿ ಸರ್ಕಾರ ಹೋಗಲಾಡಿಸಿದೆ. ನಮ್ಮ ಸರ್ಕಾರದಿಂದ ಬ್ರಾಹ್ಮಣರಿಗೆ ಬಲ ಬಂದಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಚಾರ್ಯತ್ರಯರ ಜಯಂತ್ಯುತ್ಸವ’, ‘ವೇದಮಾತಾ ಗಾಯತ್ರೀ ಪ್ರಶಸ್ತಿ ಪ್ರದಾನ’ ಹಾಗೂ ಮಂಡಳಿಯ ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಒಂದೂರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ ಎಂಬ ಕತೆ ಎಲ್ಲ ಕಾಲದಲ್ಲೂ ಇತ್ತು. ಆದರೆ, ಹಿಂದೆ ಆಡಳಿತ ನಡೆಸಿದವರಿಗೆ ಬ್ರಾಹ್ಮಣರಲ್ಲಿನ ಬಡವರು ಕಾಣಿಸಿರಲಿಲ್ಲ. ಬಿಜೆಪಿ ಸರ್ಕಾರ ಬ್ರಾಹ್ಮಣರಲ್ಲಿನ ಬಡವರ ಅಭಿವೃದ್ಧಿಗಾಗಿಯೇ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ’ ಎಂದರು.
ಮನುಕುಲಕ್ಕೆ ಸತ್ಯದರ್ಶನ ಮಾಡಿಸುವಲ್ಲಿ ಆಚಾರ್ಯತ್ರಯರಾದ ಶಂಕರಾಚಾರ್ಯ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಂದೇಶಗಳು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದರು.
ಯೋಜನೆಗಳಿಗೆ ಚಾಲನೆ:ಬ್ರಾಹ್ಮಣ ಸಮುದಾಯದ ಮಹಿಳೆಯರ ಸ್ವ ಸಹಾಯ ಸಂಘಗಳಿಗೆ ತಲಾ ₹ 1 ಲಕ್ಷ ಪ್ರೋತ್ಸಾಹಧನ ನೀಡುವುದು ಸೇರಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು.ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ₹ 150 ಕೋಟಿ ಅನುದಾನ ಒದಗಿಸಲು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಮತ್ತು ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮನವಿ ಸಲ್ಲಿಸಿದರು.
ಪ್ರಶಸ್ತಿ ಪ್ರದಾನ:ಗಾಯಕಿ ನಿರ್ಮಲಾ ಪ್ರಸನ್ನ , ವಕೀಲರಾದ ವರಲಕ್ಷ್ಮಿ ದೇಶಪಾಂಡೆ, ಹೇಮಾ, ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಪ್ರಸನ್ನಲಕ್ಷ್ಮಿ, ಸಮಾಜ ಸೇವಕಿ ಭಾಗ್ಯಮ್ಮ, ಶುಭ ಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬ್ರಾಹ್ಮಣ ಸಮುದಾಯದ ಮಹಿಳೆಯರಿಗೆ ‘ವೇದಮಾತಾ ಗಾಯತ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.