ಸಿದ್ದರಾಮಯ್ಯ
ಮಂಡ್ಯ: ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಸಿ.ಟಿ ರವಿ ಬಂಧನ ಕುರಿತಂತೆ ಇಂದು (ಶುಕ್ರವಾರ) ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಇದೊಂದು ಗಂಭೀರ ಸ್ವರೂಪದ ಅಪರಾಧ' ಎಂದು ಹೇಳಿದ್ದಾರೆ.
'ಸಿ.ಟಿ ರವಿ ಬಂಧನ ವಿರೋಧಿಸಿ ಬಿಜೆಪಿ ಪಕ್ಷ ಪ್ರತಿಭಟನೆ ಮಾಡುವ ಮೂಲಕ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳು ಭಾಷೆ ಬಳಸಿದ್ದು ಸುಳ್ಳಾದರೆ ಅವರ ಬಂಧನವೇಕಾಯಿತು? ಸಾಮಾನ್ಯವಾಗಿ ಇಂತಹ ಆರೋಪಗಳ ಬಗ್ಗೆ ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಸಿ.ಟಿ. ರವಿಯವರು ಅವಾಚ್ಯ ಪದ ಏಕೆ ಬಳಸಿದ್ದರೆಂದು ನನಗೆ ತಿಳಿದಿಲ್ಲ. ಆದರೆ ಇದೊಂದು ಗಂಭೀರ ಸ್ವರೂಪದ ಅಪರಾಧ' ಎಂದು ಅವರು ಹೇಳಿದ್ದಾರೆ.
'ಸಿ.ಟಿ.ರವಿಯವರು ತಾವು 'ಪ್ರಸ್ಟ್ರೇಷನ್' ಪದ ಬಳಸಿರುವುದಾಗಿ ತಿಳಿಸಿದ್ದಾರೆ. ಆದರೆ ಅವಾಚ್ಯ ಪದ ಬಳಸಿರುವುದು ನಿಜವೆಂದು ಸಚಿವರು ಹೇಳಿದ್ದಾರೆ. ಕೀಳು ಪದಬಳಕೆಯನ್ನು ಕೇಳಿರುವುದಾಗಿ ಅಲ್ಲಿಯೇ ಇದ್ದ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೊ ಮತ್ತು ವಿಡಿಯೊ ಇದೆ ಎಂದೂ ಹಲವರು ಹೇಳುತ್ತಿದ್ದು, ಪದಬಳಕೆಯಾಗಿರುವುದು ಸತ್ಯ' ಎಂದು ಅವರು ತಿಳಿಸಿದ್ದಾರೆ.
'ಸಿ.ಟಿ ರವಿಯವರು ಎಸಗಿರುವ ಅಪರಾಧ ಕೃತ್ಯಕ್ಕೆ ಅನುಗುಣವಾಗಿ ಕಾನೂನಿನ ಕ್ರಮ ಜರುಗಿಸಬೇಕಾಗುತ್ತದೆ. ಬೆಳಗಾವಿಯಲ್ಲಿ ಜನರ ಆಕ್ರೋಶದಿಂದ ಸಿ.ಟಿ. ರವಿ ಅವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.