ADVERTISEMENT

ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರ ಕ್ರಿಕೆಟ್‌!

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 4:18 IST
Last Updated 15 ಜುಲೈ 2019, 4:18 IST
   

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡುವುದಾಗಿ ಸದನದಲ್ಲಿ ಘೋಷಿಸುತ್ತಲೇ ರೆಸಾರ್ಟ್‌ ಸೇರಿದ ಬಿಜೆಪಿ ಶಾಸಕರು ಅಲ್ಲಿ ಬಿಡುವಿನ ವೇಳೆಯಲ್ಲಿ ಆಟೋಟದಲ್ಲಿ ತೊಡಿಗಿದ್ದಾರೆ.

ಶುಕ್ರವಾರದ ವಿಧಾನಸಭೆ ಕಲಾಪದಲ್ಲಿಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಮಂಡಿಸಲು ನಿರ್ಧರಿಸಿರುವುದಾಗಿ ಹೇಳಿರುವುದರಿಂದ ಕಮಲ ಪಾಳಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಬಿಜೆಪಿ ಶಾಸಕರನ್ನು ಸಂಪರ್ಕಿಸುವ ಅವಕಾಶ ಇರುವುದರಿಂದ ರೆಸಾರ್ಟ್‌ಗೆ ತೆರಳುತ್ತಿರುವುದಾಗಿ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಅದರಂತೆಯಲಹಂಕದ ರಾಜಾನುಕುಂಟೆ ಸಮೀಪದ ರಮಡ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದಾರೆ.

ಅಲ್ಲಿ ಕೆಲ ಶಾಸಕರು ಕ್ರಿಕೆಟ್‌ ಆಡುತ್ತಿದ್ದು, ಸದ್ಯ ವಿಡಿಯೊ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ರಾಷ್ಟ್ರೀಯ ಸುದ್ದಿ ಸಂಸ್ಥೆ ವಿಡಿಯೊವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ADVERTISEMENT

ಶಾಸಕರು ಕ್ರಿಕೆಟ್‌ ಆಡುತ್ತಿರುವ ವಿಡಿಯೋವನ್ನು ಎಎನ್‌ಐ ಪ್ರಕಟಿಸಿದ್ದಕ್ಕೆ ಕೆಲ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರೂ ಮನುಷ್ಯರಲ್ಲವೇ? ಅವರು ಯಾಕೆ ಆಡಬಾರದು? ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ.

ಇನ್ನೂ ಕೆಲವರು ‘ಇವರನ್ನು 2023ರ ವಿಶ್ವಕಪ್‌ ಕ್ರಿಕೆಟ್‌ಗೆ ಕಳುಹಿಸಬೇಕು’ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ‘ಇವರು ಮನುಷ್ಯರೇ ಆಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಅಧಿಕಾರಿಯನ್ನು ಬ್ಯಾಟ್‌ನಿಂದ ತಳಿಸಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಆಕಾಶ್‌ ವಿಜಯವರ್ಗೀಯ ಅವರನ್ನೂ ಈ ಪಂದ್ಯಕ್ಕೆ ಕರೆದೊಯ್ಯಬೇಕಿತ್ತು,’ ಅವರೊಬ್ಬರ ಉತ್ತಮ ಓಪನರ್‌ ಮತ್ತು ಉತ್ತಮ ಫಿನಿಷರ್‌ ಎಂದೂ ಕೆಲವು ಕಟಕಿಯಾಡಿದ್ದಾರೆ.

ರಾಜ್ಯದಲ್ಲಿ ಬರಗಾಲ ಇರುವಾಗ ಗ್ರಾಮ ವಾಸ್ತವ್ಯ ಬೇಕಿತ್ತೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದರು. ಆದರೆ, ಅದೇ ಬರಗಾಲದ ಸನ್ನಿವೇಶದಲ್ಲೇ ಬಿಜೆಪಿ ರೆಸಾರ್ಟ್ ಸೇರಿದೆ. ಹೀಗಾಗಿ ಈ ವಿಡಿಯೋ ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ತಳ್ಳಿದೆ.

ಬಿಜೆಪಿ ರೆಸಾರ್ಟ್‌ ಸೇರಿರುವ ಹೊತ್ತಲ್ಲೇ ಆಡಳಿತ ಪಕ್ಷಗಳ ಶಾಸಕರೂ ಹೋಟೆಲ್‌ಗಳನ್ನು ಹೊಕ್ಕಿದ್ದು, ಜನರಿಂದ ಮೂದಲಿಕೆಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.