ಬೆಂಗಳೂರು: ತ್ಯಾಗ ಹಾಗೂ ಬಲಿದಾನದ ಅರ್ಥ ನಿಮಗೆ ತಿಳಿದಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ತ್ಯಾಗ, ಬಲಿದಾನ ಮಾಡಿದ ಏಕೈಕ ಪಕ್ಷ ಕಾಂಗ್ರೆಸ್ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಯ ವರದಿ ಉಲ್ಲೇಖಿಸಿ ಟ್ಚೀಟ್ ಮಾಡಿರುವ ಬಿಜೆಪಿ, ಎಷ್ಟು ಸುಂದರವಾಗಿ ಸುಳ್ಳು ಹೇಳಿ ಬಿಟ್ಟಿರಿ ಎಂದು ಕುಹಕವಾಡಿದೆ.
‘ದೇಶದ ಆಡಳಿತವನ್ನು ಒಂದು ಕುಟುಂಬದ ವಶದಲ್ಲಿ ಇಟ್ಟುಕೊಳ್ಳುವುದಕ್ಕೆ ಮಾಡುವ ತಂತ್ರಗಾರಿಕೆಗಳನ್ನು ತ್ಯಾಗ, ಬಲಿದಾನಕ್ಕೆ ಹೋಲಿಸಲು ಹೇಗೆ ಸಾಧ್ಯ? ನಿಮ್ಮ ಭಾಷಣ ಕೇಳಲು ಬರುವ ಜನ ಮುಗ್ಧರಿರಬಹುದು, ಆದರೆ ದಡ್ಡರಲ್ಲ ಎನ್ನುವುದನ್ನು ತಿಳಿದುಕೊಳ್ಳಿ’ ಎಂದು ಡಿಕೆಶಿ ಅವರನ್ನು ಉದ್ದೇಶಿಸಿ ಬಿಜೆಪಿ ಟ್ವೀಟ್ ಮಾಡಿದೆ.
‘ಪ್ರಧಾನಿ ಹುದ್ದೆ ಒಲಿದು ಬಂದರೂ ನಿರಾಕರಿಸುವ ಮೂಲಕ ಸೋನಿಯಾ ಗಾಂಧಿ ತ್ಯಾಗ ಮಾಡಿದರು ಎಂದು ಎಷ್ಟು ಸುಂದರವಾಗಿ ಸುಳ್ಳು ಹೇಳಿ ಬಿಟ್ಟಿರಿ ಡಿಕೆಶಿ ಅವರೇ? ಸೋನಿಯಾ ಗಾಂಧಿ ಅವರು ಆ ಸಂದರ್ಭದಲ್ಲಿ ಹೆಣೆದಿದ್ದು ರಾಜಕೀಯ ಲೆಕ್ಕಾಚಾರ. ಅದನ್ನು ತ್ಯಾಗ,ಬಲಿದಾನ ಎನ್ನಲು ಸಾಧ್ಯವಿಲ್ಲ’ ಎಂದು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದೆ.
‘ಮಾನ್ಯ ಡಿಕೆಶಿ ಅವರೇ, ನಿಮ್ಮ ಭಾಷಣದ ಪ್ರೇರಣೆಯಲ್ಲಿ ಒಂದು ಹೊಸ ಗಾದೆ ರಚಿಸೋಣ. ಬಿಟ್ಟುಕೊಟ್ಟಿದ್ದೆಲ್ಲ ತ್ಯಾಗವಲ್ಲ, ಜೈಲಿಗೆ ಹೋದವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಲ್ಲ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.