ADVERTISEMENT

ಅತೃಪ್ತರ ಸೆಳೆದು ಸರ್ಕಾರ ಕೆಡವಲು ಬಿಜೆಪಿ ತಂತ್ರ?

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 20:20 IST
Last Updated 23 ಡಿಸೆಂಬರ್ 2018, 20:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್ಸಿನ ಅತೃಪ್ತ ಶಾಸಕರ ಜೊತೆ ಸಂ‍ಪರ್ಕ ಸಾಧಿಸಿರುವ ಬಿಜೆಪಿ ನಾಯಕರು, ಸಮ್ಮಿಶ್ರ ಸರ್ಕಾರ ಕೆಡವಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಕಾಂಗ್ರೆಸ್‌ ಒಳಗಿನ ಅತೃಪ್ತಿ ಮೇಲ್ನೋಟಕ್ಕೆ ಸಾಮಾನ್ಯ ಎನಿಸುವಂತಿದ್ದರೂ, ನಾಯಕರೊಳಗಿನ ಗುಂಪುಗಾರಿಕೆಯಿಂದಾಗಿ ಶಾಸಕರೂ ಹಲವು ಬಣಗಳಾಗಿದ್ದಾರೆ. ಸಚಿವ ಸ್ಥಾನ ಹಂಚಿಕೆ ಸಂದರ್ಭದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಇದು ರಾಜ್ಯದಕೆಲವು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಹೀಗಾಗಿ, ಅತೃಪ್ತಿ ಶಮನಗೊಳಿಸುವ ಹೊಣೆಯನ್ನು ಸಿದ್ದರಾಮಯ್ಯ ಅವರೇ ಹೊರಬೇಕಾಗಿದೆ. ಇತರ ನಾಯಕರು ಈ ವಿಷಯದಲ್ಲಿ ಮೌನ ವಹಿಸುವ ಸಾಧ್ಯತೆ ಇದೆ.

ಸಂಪುಟ ಪುನಾರಚನೆಯಿಂದ ಉಂಟಾಗಿರುವ ಈ ಅಸಮಾಧಾನದ ಲಾಭ ಪಡೆದುಕೊಂಡು ಅತೃಪ್ತರ ಮೂಲಕವೇ ಇತರ ಕೆಲವು ಶಾಸಕರನ್ನೂ ಪಕ್ಷದತ್ತ ಸೆಳೆಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ವಾರದೊಳಗೆ ಯಶಸ್ಸು ಕಾಣುವ ವಿಶ್ವಾಸವನ್ನೂ ಈ ನಾಯಕರು ಹೊಂದಿದ್ದಾರೆ ಎಂಬ ಮಾತೂ ಇದೆ.

ADVERTISEMENT

ಸಂಪುಟದಲ್ಲಿ ಹಾಗೂ ನಿಗಮ ಮಂಡಳಿಯಲ್ಲೂ ಅವಕಾಶ ಸಿಗದ ಶಾಸಕರನ್ನು ಸಂಪರ್ಕಿಸುವ ಪ್ರಯತ್ನವನ್ನು ಕಮಲ ಪಕ್ಷದ ಸ್ಥಳೀಯ ನಾಯಕರು ನಡೆಸುತ್ತಿದ್ದಾರೆ. ಅವರು ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸು
ವುದಕ್ಕೆ ನೆರವಾಗುತ್ತಿದ್ದಾರೆ. ಶೀಘ್ರದಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಖಚಿತ ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದರು.

ಹೈಕಮಾಂಡ್‌ ಮೊರೆಗೆ ನಿರ್ಧಾರ: ಸಮ್ಮಿಶ್ರ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ರಾಮಲಿಂಗಾ ರೆಡ್ಡಿ ಅವರಿಗೆ ಪ್ರಾತಿನಿಧ್ಯ ನೀಡದಿರುವುದು ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಸಂಪುಟದಲ್ಲಿ
ಸ್ಥಾನ ಕಲ್ಪಿಸಬೇಕು ಅಥವಾ ಪಕ್ಷದಲ್ಲಾದರೂ ಉನ್ನತ ಸ್ಥಾನ ನೀಡಬೇಕು ಎಂದು ಒತ್ತಾಯಿಸಲು ತೀರ್ಮಾನಿಸಿದ್ದಾರೆ. ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಿಬಿಎಂಪಿಯ ಕಾಂಗ್ರೆಸ್‌ ಸದಸ್ಯರು, ನಗರದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳುಒತ್ತಾಯಿಸಿದ್ದಾರೆ. ರೆಡ್ಡಿ ಅವರಿಗಾದ ಅನ್ಯಾಯ ಸರಿಪಡಿಸುವಂತೆ ಹೈಕಮಾಂಡ್‍ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಖಾತೆ ತ್ಯಜಿಸಲು ನಿರಾಕರಣೆ?

ಗೃಹ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೊಂದಿದ್ದಾರೆ. ಅವರು ಈ ಎರಡೂ ಖಾತೆಗಳನ್ನು ಬಿಟ್ಟುಕೊಡಲು ತಯಾರಿಲ್ಲ ಎಂದು ಅವರಾಪ್ತ ಮೂಲಗಳು ತಿಳಿಸಿವೆ. ಆದರೆ, ಪರಮೇಶ್ವರ ಬಳಿ ಇರುವ ಈ ಎರಡೂ ಖಾತೆಗಳನ್ನು ಹಿಂಪಡೆದು, ಅವರಿಗೆ ಬೇರೆ ಖಾತೆಗಳ ಜವಾಬ್ದಾರಿ ಕೊಡುವಂತೆ ಹೈಕಮಾಂಡ್‌ ಮೇಲೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸೋಮವಾರ ರಾತ್ರಿ ನಗರಕ್ಕೆ ಬರಲಿದ್ದು, ಬಳಿಕ ಖಾತೆ ಮರು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.