ಕಲಬುರ್ಗಿ: ‘ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ‘ಶೋಲೆ’ ಚಲನಚಿತ್ರವನ್ನೇ ಹೋಲುತ್ತದೆ. ಹೀರೊಗಳೆಲ್ಲ ಸೇರಿಕೊಂಡು ಮಲ್ಲಿಕಾರ್ಜುನ ಖರ್ಗೆ ಎಂಬ ಗಬ್ಬರ್ಸಿಂಗ್ನನ್ನು ಕೆಡವಿದ್ದೇವೆ’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಲೇವಡಿ ಮಾಡಿದರು.
ಶನಿವಾರ ಇಲ್ಲಿ ನಡೆದ ಸಂಸದರು ಹಾಗೂ ಪಕ್ಷದ ಮುಖಂಡರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಅವರು ಶೋಲೆ ಚಿತ್ರದ ಬಲದೇವ್ಸಿಂಗ್ ಠಾಕೂರ್ ಇದ್ದ ಹಾಗೆ. ನಾನು ಅಮಿತಾಬ್ ಬಚ್ಚನ್, ಬಾಬುರಾವ ಚಿಂಚನಸೂರ ಧರ್ಮೇಂದ್ರನ ಪಾತ್ರಧಾರಿ. ಗಬ್ಬರ್ಸಿಂಗ್ನಂತೆ ಸೊಕ್ಕಿನಿಂದ ಮೆರೆಯುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉರುಳಿಸುವಲ್ಲಿ ನಾವು ಗೆದ್ದಿದ್ದೇವೆ’ ಎಂದು ಹೋಲಿಕೆ ಮಾಡಿದರು.
ಇದನ್ನೂ ಓದಿ...ಕಲಬುರ್ಗಿಗಾಗಿ ಖರ್ಗೆ; ದೇಶಕ್ಕಾಗಿ ಮೋದಿ
‘ಅರೆ ಓ ಸಾಂಬಾ... ಕಿತನೇ ಆದ್ಮಿ ಥೇ? ಎಂಬುದು ಗಬ್ಬರ್ಸಿಂಗ್ನ ಪೇಮಸ್ ಡೈಲಾಗ್. ಇಲ್ಲಿ ಸಾಂಬಾ ಅಂದರೆ ಬೇರಾರೂ ಅಲ್ಲ; ಅವನೇ ಪ್ರಿಯಾಂಕ್ ಖರ್ಗೆ. ಸ್ವಂತ ಕ್ಷೇತ್ರದಲ್ಲಿ ಅಪ್ಪನಿಗೆ ಐದು ಸಾವಿರ ಮತಗಳ ಲೀಡ್ ಕೊಡಲಾಗದೇ ಸೋಲೊಪ್ಪಿಕೊಂಡಿದ್ದಾನೆ ಈ ಸಾಂಬಾ’ ಎಂದೂ ಚುಚ್ಚಿದರು.
ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ‘ಚುನಾವಣೆ ಮುಗಿದಿದೆ. ಆರೋಪಗಳಿಗೂ ಕೊನೆ ಹಾಡೋಣ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ನೋವಾಗುವ ಯಾವುದೇ ಆರೋಪಗಳನ್ನು ಇನ್ನು ಮುಂದೆ ಯಾರೂ ಮಾಡಬಾರದು. ಇಲ್ಲದಿದ್ದರೆ ಜನರು ನಮ್ಮನ್ನೂ ಅಹಂಕಾರಿಗಳು ಎಂದು ಭಾವಿಸುತ್ತಾರೆ’ ಎಂದು ಕಿವಿಮಾತು ಹೇಳಿದರು.
‘ಕೆಲ ಕಾಂಗ್ರೆಸ್ ಮುಖಂಡರು ಬಿಜೆಪಿಗೆ’
ಕೊಪ್ಪ (ಮಂಡ್ಯ): ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಎನ್. ಚಲುವರಾಯಸ್ವಾಮಿ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರುವುದು ಖಚಿತ‘ ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ, ಕೆ. ಸುರೇಶ್ ಗೌಡ ಹೇಳಿದರು.
ಕೊಪ್ಪ ಸಮೀಪದ ಮೂಡ್ಯ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಇವರಿಗೆ ಬಿಜೆಪಿ ಸೇರಲು ಒಂದು ನೆಪ ಬೇಕು. ಅದಕ್ಕಾಗಿಯೇ ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ’ ಎಂದರು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.