ADVERTISEMENT

ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ನಿಂದ ದೇಶ ಕೊಳ್ಳೆ, ಕುಟುಂಬ ಸೇವೆ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2021, 14:55 IST
Last Updated 15 ಆಗಸ್ಟ್ 2021, 14:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕಾಂಗ್ರೆಸ್ ಮಾಡಿದ್ದು ಕುಟುಂಬ ಸೇವೆ ಮತ್ತು ದೇಶವನ್ನು ಕೊಳ್ಳೆ ಹೊಡೆದದ್ದು ಮಾತ್ರ ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿ ಬಿಜೆಪಿಯ ಕರ್ನಾಟಕ ಘಟಕದ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಲಾಗಿದೆ.

ದೇಶ ವಿಭಜನೆ, ಬೋಫೋರ್ಸ್ ಹಗರಣ, ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ, ಭಾರತದ ಭೂಮಿಯನ್ನು ಚೀನಾಕ್ಕೆ ಕೊಟ್ಟಿದ್ದು, ತುರ್ತು ಪರಿಸ್ಥಿತಿ ಹೇರಿಕೆ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

‘ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಈಗ ಪ್ರೀತಿ ಮೂಡುತ್ತಿದೆ. ಕಾಂಗ್ರೆಸ್ ಪಕ್ಷವು ಪಟ್ಟಭದ್ರರ ತೆಕ್ಕೆಗೆ ಜಾರಬಾರದೆಂಬುದೇ ಬೋಸ್ ಅವರ ವಾದವಾಗಿತ್ತು. ಬೋಸ್ ಬಗ್ಗೆ ಈಗ ಹುಸಿ ಗೌರವ ತೋರುವ ಕಾಂಗ್ರೆಸ್ಸಿಗರು ಬೋಸ್ ಅವರ ಬದುಕಿನ ವಿವರಗಳನ್ನು ರಹಸ್ಯವಾಗಿಟ್ಟಿದ್ದೇಕೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ಸ್ವಾತಂತ್ರ್ಯದ ಬಳಿಕ ದೇಶದ ವಿರುದ್ಧ ಕಾಂಗ್ರೆಸ್ ಮಾಡಿದ ಹೋರಾಟದ ಪಟ್ಟಿ ಬೇಕೇ? ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವವನ್ನು ಚೀನಾಕ್ಕೆ ದೇಶಕ್ಕೆ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್, ಸಿಖ್ ನರಮೇಧ‌ ನಡೆಸಿದ್ದು ಕಾಂಗ್ರೆಸ್, ಸಿಎಎ ವಿರೋಧಿಸಿದ್ದು ಕಾಂಗ್ರೆಸ್’ ಎಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.