ಬಾಗಲಕೋಟೆ:‘ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ, ಇದು ಆಗಬಾರದಿತ್ತು. ಆಗಿ ಹೋಗಿದೆ. ಯಾರ ಮೇಲೂ ಬಾಂಬ್ ಹಾಕಬಾರದಿತ್ತು. ಮಾನವೀಯ ದೃಷ್ಟಿಯಿಂದ ಉಗ್ರರೇ ಇರಲಿ, ಯೋಧರೇ ಆಗಲಿ. ಯಾರೇ ಇರಲಿ ಬಾಂಬ್ ದಾಳಿ ನಡೆಸಬಾರದಿತ್ತು’ ಎಂದು ಮಾಧ್ಯಮದವರ ಎದುರು ಹೇಳಿಕೆ ನೀಡಿದ್ದ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಅದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಪ್ರಸಂಗ ಬುಧವಾರ ನಗರದಲ್ಲಿ ನಡೆಯಿತು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಎಂ.ಸಿ.ಮನಗೂಳಿ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ್ದರು. ನಂತರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ‘ನಿಮ್ಮ (ಮಾಧ್ಯಮದವರ) ಪ್ರಶ್ನಾವಳಿ ನನಗೆ ಅರ್ಥವಾಗಲಿಲ್ಲ. ಹಾಗಾಗಿ ಆ ರೀತಿ ಉತ್ತರಿಸಿದೆ. ಆಡೋ ಹುಡುಗರನ್ನು ಕೇಳಿದರೂ ಸೈನ್ಯದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಾಗಿದ್ದಾಗ ಉಗ್ರರ ಪರ ನಾನು ಹೇಗೆ ಮಾತಾಡಲು ಸಾಧ್ಯ.ನಾನು ಸಚಿವನಾಗಿ ಆ ರೀತಿ ಹೇಳಿಕೆಕೊಡಲು ಸಾಧ್ಯವೇ’ ಎಂದು ಸ್ಪಷ್ಟನೆ ವೇಳೆ ಪ್ರಶ್ನಿಸಿದರು.
‘ನನ್ನ 10 ಕೆಲಸಗಳಲ್ಲಿ ಎಲ್ಲೋ ಒಂದು ತಪ್ಪಾಗಿದ್ದರೂ ಅದನ್ನೇ ನೀವು ವೈಭವೀಕರಿಸುತ್ತೀರಿ. ವಯೋಸಹಜ ತೊಂದರೆಯೂ ನಿಮ್ಮ ಪ್ರಶ್ನೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲು ಕಾರಣವಾಗಿದೆ’ ಎಂದು ಸಚಿವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.