ADVERTISEMENT

ನಿವೃತ್ತ ಇನ್‌ಸ್ಪೆಕ್ಟರ್‌ ಬಳಿ ಲಂಚ: ಗೃಹ ರಕ್ಷಕ ಬಂಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 15:42 IST
Last Updated 22 ನವೆಂಬರ್ 2022, 15:42 IST
   

ಬೆಂಗಳೂರು: ವಿಧಾನಸೌಧದಲ್ಲಿ ಕಚೇರಿ ಹೊಂದಿರುವ ಗೃಹ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಸತೀಶ್‌ ಎಂಬ ಗೃಹರಕ್ಷಕ ಸಿಬ್ಬಂದಿಯನ್ನು ನಿವೃತ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರ ವೈದ್ಯಕೀಯ ವೆಚ್ಚದ ಬಿಲ್ಲಿನ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ₹ 20,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್‌ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿದ್ದು ನಿವೃತ್ತರಾಗಿರುವ ಪಿ.ಎನ್‌. ಗಣೇಶ್‌ ಎಂಬುವವರು ತಮ್ಮ ವೈದ್ಯಕೀಯ ವೆಚ್ಚದ ಬಿಲ್ಲನ್ನು ಮರುಪಾವತಿ ಮಾಡುವಂತೆ ಕೋರಿ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಸಂಬಂಧಿಸಿದ ಅಧಿಕಾರಿಯ ಜತೆ ಮಾತನಾಡಿ, ಬಿಲ್‌ ಮೊತ್ತ ಮರುಪಾವತಿಗೆ ಮಂಜೂರಾತಿ ಕೊಡಿಸಲು ₹ 20,000 ಲಂಚ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದರು.

‘ಗಣೇಶ್‌ ಅವರನ್ನು ಪರಾಗ್‌ ಹೋಟೆಲ್‌ ಬಳಿಗೆ ಮಂಗಳವಾರ ಕರೆಸಿಕೊಂಡ ಸತೀಶ್‌, ಲಂಚದ ಹಣ ಪಡೆದುಕೊಂಡರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದರು. ಪ್ರಾಥಮಿಕ ವಿಚಾರಣೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಅಶೋಕ್‌ ಕೆ.ವಿ. ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಅಂತೋನಿ ಜಾನ್‌, ಇನ್‌ಸ್ಪೆಕ್ಟರ್‌ ಬಾಲಾಜಿ ಬಾಬು ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.