ADVERTISEMENT

ನೀಲಿ ಜಲಪಾತ ಬಳಿ ಕಟ್ಟಡ: ವರದಿಗೆ ಕೇಂದ್ರ ಅರಣ್ಯ ಇಲಾಖೆ ನಿರ್ದೇಶನ

ಪಿಟಿಐ
Published 8 ಜನವರಿ 2024, 14:30 IST
Last Updated 8 ಜನವರಿ 2024, 14:30 IST
   

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ‘ನೀಲಿ ಜಲಪಾತ’ದ (ಬ್ಲೂ ವಾಟರ್‌ಫಾಲ್ಸ್‌) ಬಳಿ ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಿರುವ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರಿಗೆ ಸೂಚಿಸಿದೆ. 

ಅಣಶಿ-ಕದ್ರಾ ರಸ್ತೆ ಬಳಿಯ ಜಲ‍ಪಾತಕ್ಕೆ ಪ್ರವಾಸಿಗರಿಗೆ ನಿಷೇಧ ಇದೆ. ಆದರೆ, ಪ್ರವಾಸೋದ್ಯಮ ಉತ್ತೇಜಿಸಲು ಅರಣ್ಯ ಇಲಾಖೆಯೇ ಕಾನೂನುಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿದೆ ಎಂದು ಆರೋಪಿಸಿ ಸ್ಥಳೀಯರು ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು. 

ಜಲಪಾತಕ್ಕೆ ಸಾರ್ವಜನಿಕರ ಪ್ರವೇಶವಿಲ್ಲವೆಂದು ಅರಣ್ಯ ಇಲಾಖೆ ಸೂಚನಾ ಫಲಕ ಹಾಕಿತ್ತು. ಆದರೀಗ ಪ್ರವಾಸೋದ್ಯಮ ಉತ್ತೇಜಿಸಲು ಅರಣ್ಯ ಇಲಾಖೆಯೇ ಕಾನೂನುಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿದೆ. ಒಂದೆಡೆ ಮಾನವ- ವನ್ಯಜೀವಿ ಸಂಘರ್ಷ ತಪ್ಪಿಸಲು ಹಾಗೂ ಹುಲಿಗಳ ಸಂಖ್ಯೆ ಹೆಚ್ಚಿಸಲು ಅರಣ್ಯ ಇಲಾಖೆ ಸ್ಥಳೀಯ ಜನರನ್ನು ಸ್ಥಳಾಂತರ ಮಾಡುತ್ತಿದೆ. ಇನ್ನೊಂದೆಡೆ ಹುಲಿ ಕಾಡಿನ ಒಳಗೆ ಜನರ ಮೋಜುಮಸ್ತಿಗೆ ಇಲಾಖೆಯ ಅನುವು ಮಾಡಿ ಕೊಡುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದರು. 

ADVERTISEMENT

’ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳ ಕುರಿತು ಸಚಿವಾಲಯಕ್ಕೆ ಒಂಬತ್ತು ತಿಂಗಳಲ್ಲೇ 15 ದೂರುಗಳು ಬಂದಿವೆ. ಈ ಬಗ್ಗೆ ಶೀಘ್ರದಲ್ಲಿ ವರದಿ ಸಲ್ಲಿಸಬೇಕು’ ಎಂದು ಸಚಿವಾಲಯದ ಸಹಾಯಕ ಮಹಾನಿರ್ದೇಶಕರು (ಅರಣ್ಯ) ಸೂಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.