ADVERTISEMENT

ಅನಂತಕುಮಾರ್‌ ನನ್ನ ರಾಜಕೀಯ ಗುರು: ಸಂಸದ ಸುರೇಶ ಅಂಗಡಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 6:17 IST
Last Updated 12 ನವೆಂಬರ್ 2018, 6:17 IST
   

ಬೆಳಗಾವಿ: ಸದಾ ಮಾರ್ಗದರ್ಶನ ನೀಡುತ್ತಿದ್ದ ಅನಂತಕುಮಾರ ಅವರು ನನ್ನ ರಾಜಕೀಯ ಗುರು ಎಂದು‌ ಸಂಸದ ಸುರೇಶ ಅಂಗಡಿ ಕಂಬನಿ ಮಿಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಬಿವಿಪಿ ಹಿನ್ನೆಲೆಯಿಂದ ಬಂದಿದ್ದ ಅನಂತಕುಮಾರ ಅವರು ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ಬೆನ್ನಿಗೆ ನಿಂತು ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟಿಸಿದ್ದರು. ರಾಷ್ಟ್ರ ರಾಜಕಾರಣದಲ್ಲಿ‌ ತಮ್ಮದೇ ಆದ ಚಾಪು ಮೂಡಿಸಿದ್ದ ಅವರು, ಮೂರು‌ ಬಾರಿ ಕೇಂದ್ರ ಸಚಿವರಾಗಿ ರಾಜ್ಯಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಎರಡನೇ ಅವಧಿಗೆ‌ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಮುಂದುವರೆಯುವಂತೆ ಸೂಚಿಸಿದ್ದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿ ಟಿಕೆಟ್ ಕೊಡಿಸಿದ್ದರು. ಮೊದಲ‌ ಸಲ‌ ಸಂಸದನಾದಾಗ ‌ನನಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದಾರೆ. ಬೆಳಗಾವಿ ಬಗ್ಗೆಯೂ ಅವರಿಗೆ ವಿಶೇಷ ಗೌರವ, ಪ್ರೀತಿ‌ ಇತ್ತು.‌ ಇಲ್ಲಿ‌ ನಡೆಯುವ ಬಹುತೇಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದರು ಎಂದು ನೆನೆದರು.

ADVERTISEMENT

ಜಿಲ್ಲಾ ಪ್ರವಾಸ ರದ್ದು
ಬೆಳಗಾವಿ: ಅನಂತಕುಮಾರ್ ನಿಧನದಿಂದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ರದ್ದಾಗಿದೆ.

ಸಿದ್ದರಾಮಯ್ಯ ಅವರು ರಾಯಬಾಗ ತಾಲ್ಲೂಕಿನ ಕಣದಾಳದಲ್ಲಿ ಬೀರೇಶ್ವರ ದೇವಸ್ಥಾನದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವವರಿದ್ದರು. ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡುವವರಿದ್ದರು.

ಜಿ. ಪರಮೇಶ್ವರ ಅವರು ರಾತ್ರಿ ಬಂದು ಇಲ್ಲಿ ತಂಗುವವರಿದ್ದರು. ನ. 13ರಂದು ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ, ನಂತರ ಚಿಕ್ಕೋಡಿಯ ಕೆರೂರ ಹಾಗೂ ಖಡಕಲಾಟದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರಿದ್ದರು. ಅನಂತಕುಮಾರ್ ನಿಧನದಿಂದಾಗಿ ಈ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.