ಬೆಂಗಳೂರು: ಕೋವಿಡ್-19ನ ಪರಿಣಾಮಕಾರಿ ನಿರ್ವಹಣೆ ತೋರಿದ ದೇಶದ ನಾಲ್ಕು ನಗರಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಅವುಗಳ ಪೈಕಿ ಬೆಂಗಳೂರು ನಗರ ಕೂಡ ಸೇರಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ಯೋಧರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ಕೊರೊನಾ ಯೋಧರ ಪರಿಶ್ರಮಕ್ಕೆ ಹೆಮ್ಮೆಯ ಅನುಮೋದನೆ ದೊರಕಿದೆ. ಕೋವಿಡ್-19ನ ಪರಿಣಾಮಕಾರಿ ನಿರ್ವಹಣೆಗಾಗಿ 4 ಮಾದರಿ ನಗರಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು. ಈ ಉತ್ತಮ ಸೇವೆಯನ್ನು ಮುಂದುವರಿಸೋಣ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ 19 ನಿರ್ವಹಣೆಯ ಕುರಿತಾದ ಎರಡು ಪ್ರಮುಖ ವಿಚಾರಗಳಾದ ಹೆಚ್ಚಿನ ಸಂಖ್ಯೆಯ ಸಕಾರಾತ್ಮಕ ಪ್ರಕರಣಗಳನ್ನು ನಿಭಾಯಿಸುವಲ್ಲಿ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ತೆಗೆದುಕೊಂಡಿರುವ ಕ್ರಮಗಳನ್ನು ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಕೇಂದ್ರ ಸರ್ಕಾರವು ವಿವಿಧ ಪುರಸಭೆಗಳ ನಡುವೆ ಸಭೆಯನ್ನು ಆಯೋಜಿಸಿತ್ತು.
ಸಭೆಯಲ್ಲಿ ಜೈಪುರ ಮತ್ತು ಇಂದೋರ್ ಮೆಟ್ರೋಪಾಲಿಟನ್ ನಗರಗಳು ಹೆಚ್ಚಿನ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ಕಂಡುಕೊಂಡ ಹೊಸ ಮಾರ್ಗಗಳು ಮತ್ತು ಚೆನ್ನೈ ಮತ್ತು ಬೆಂಗಳೂರಿನಂತ ದೊಡ್ಡ ನಗರಗಳು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕೈಗೊಂಡ ವಿಧಾನಗಳಿಗಾಗಿ ಮಾದರಿ ನಗರಗಳೆಂದು ಗುರುತಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.