ADVERTISEMENT

ಚಾಮರಾಜನಗರದ ಮಾಜಿ ಸಂಸದ ಆರ್‌. ಧ್ರುವನಾರಾಯಣ ನಿಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 14:53 IST
Last Updated 11 ಮಾರ್ಚ್ 2023, 14:53 IST
ಆರ್‌. ಧ್ರುವನಾರಾಯಣ
ಆರ್‌. ಧ್ರುವನಾರಾಯಣ    

ಮೈಸೂರು/ಚಾಮರಾಜನಗರ: ಕೆಪಿಪಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ (61) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ಬೆಳಿಗ್ಗೆ ವಾಯುವಿಹಾರದಿಂದ ವಾಪಸಾಗಿದ್ದ ಅವರು ಮನೆಯ ಮಹಡಿಯಿಂದ ಕಾರು ಚಾಲಕ ನನ್ನು ಕರೆದಿದ್ದರು. ಚಾಲಕ ತೆರಳಿ ನೋಡುವಷ್ಟರಲ್ಲಿ ವಾಂತಿ, ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಪತ್ನಿ ವೀಣಾ, ಮಕ್ಕಳಾದ ವಕೀಲ ದರ್ಶನ್‌ ಹಾಗೂ ಧೀರೇನ್‌ ಇದ್ದಾರೆ.

ನಗರದ ವಿಜಯನಗರ 3ನೇ ಹಂತದಲ್ಲಿರುವ ಅವರ ಮನೆಯಲ್ಲಿ, ನಂತರ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.

ADVERTISEMENT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಂಸದರಾದ ಕೆ.ಸಿ.ವೇಣುಗೋಪಾಲ್, ವಿ.ಶ್ರೀನಿವಾಸ ಪ್ರಸಾದ್, ಡಿ.ಕೆ.ಸುರೇಶ್ ಮೊದಲಾದವರು ಅಂತಿಮ ದರ್ಶನ ಪಡೆದರು.

ಶನಿವಾರ ರಾತ್ರಿ, ಅವರ ಹುಟ್ಟೂರಾದ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಗೆ ಪಾರ್ಥಿವ ಶರೀರವನ್ನು ಸಾಗಿಸಲಾಯಿತು. ಭಾನುವಾರ ಬೆಳಿಗ್ಗೆ ಗ್ರಾಮಸ್ಥರು, ಸಂಬಂಧಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಮಧ್ಯಾಹ್ನ ಅವರ ಜಮೀನಿನಲ್ಲಿರುವ ಅವರ ತಂದೆ–ತಾಯಿ ಸಮಾಧಿಯ ಬಳಿಯೇ ಅಂತ್ಯಕ್ರಿಯೆ ನಡೆಯಲಿದೆ.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.