ADVERTISEMENT

ಸರ್ಕಾರಿ ವೇದಿಕೆ ಮೇಲೆ ಪ್ರೇಮ ನಿವೇದನೆ! ಕ್ಷಮೆಯಾಚಿಸಿದ ಚಂದನ್‌ ಶೆಟ್ಟಿ

ನಿವೇದಿತಾಗೆ ಉಂಗುರ ತೊಡಿಸಿದ ಚಂದನ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 10:29 IST
Last Updated 5 ಅಕ್ಟೋಬರ್ 2019, 10:29 IST
ಗಾಯಕ ಚಂದನ್‌ ಶೆಟ್ಟಿ, ಬಿಗ್‌ಬಾಸ್‌ ಸ್ಪರ್ಧಿ ನಿವೇದಿತ ಗೌಡ ಅವರಲ್ಲಿ ಪ್ರೇಮ ನಿವೇದನೆ ಮಾಡಿದ ಕ್ಷಣ
ಗಾಯಕ ಚಂದನ್‌ ಶೆಟ್ಟಿ, ಬಿಗ್‌ಬಾಸ್‌ ಸ್ಪರ್ಧಿ ನಿವೇದಿತ ಗೌಡ ಅವರಲ್ಲಿ ಪ್ರೇಮ ನಿವೇದನೆ ಮಾಡಿದ ಕ್ಷಣ   

ಮೈಸೂರು: ಯುವ ದಸರೆ ಕಾರ್ಯಕ್ರಮದಲ್ಲಿ ಗಾಯಕ ಚಂದನ್‌ ಶೆಟ್ಟಿ, ಬಿಗ್‌ಬಾಸ್‌ ಸ್ಪರ್ಧಿ ನಿವೇದಿತ ಗೌಡ ಅವರಲ್ಲಿ ಪ್ರೇಮ ನಿವೇದನೆ ಮಾಡಿ ವೇದಿಕೆ ದುರ್ಬಳಕೆ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸರ್ಕಾರಿ ಕಾರ್ಯಕ್ರಮದಲ್ಲಿ, ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವೈಯಕ್ತಿಕ, ಖಾಸಗಿ ಬದುಕಿನ ವಿಚಾರಗಳಿಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ದಸರಾ ಸಮಿತಿ ಹಾಗೂ ಸಂಘಟಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ, ಶುಕ್ರವಾರ ರಾತ್ರಿ 10.30ವರೆಗೆ ಇದ್ದ ಕಾರ್ಯಕ್ರಮ ಮುಗಿಯುಷ್ಟರಲ್ಲಿ ಮಧ್ಯರಾತ್ರಿ 12 ಗಂಟೆ ಆಗಿತ್ತು.

ಸಂಗೀತ ಕಾರ್ಯಕ್ರಮ ನೀಡಲು ರ‍್ಯಾಪರ್‌ ಚಂದನ್‌ ಶೆಟ್ಟಿ ಬಂದಿದ್ದರು. ನಿವೇದಿತಾ ಗೌಡ ಅವರಿಗೆ ಅಧಿಕೃತ ಆಹ್ವಾನ ಇರಲಿಲ್ಲ. ಕಾರ್ಯಕ್ರಮ ಅಂತ್ಯದಲ್ಲಿ ಮೈಸೂರಿನವರೇ ಆದ ನಿವೇದಿತಾ ಅವರಲ್ಲಿ ‘ನನ್ನ ಮದುವೆ ಆಗುತ್ತೀಯಾ?’ ಎನ್ನುತ್ತಾ ಉಂಗುರು ತೊಡಿಸಿ ಅಪ್ಪಿಕೊಂಡಿದ್ದಾರೆ.

ADVERTISEMENT

‘ಹೇಗಿತ್ತು ನನ್ನ ಪ‍್ರಪೋಸಲ್‌’ ಎಂದು ಚಂದನ್‌ ಕೇಳುತ್ತಾರೆ. ಅದಕ್ಕೆ ನಿವೇದಿತಾ, ‘ಫುಲ್‌ ಶಾಕ್‌ ಆಗ್ತಿದೆ. ಲವ್‌ ಯೂ ಸೋ ಮಚ್‌’ ಎನ್ನುತ್ತಾರೆ.

ಅಕ್ಷಮ್ಯ: ‘ನಾಡಹಬ್ಬದ ವೇದಿಕೆಯಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಇದು ಅಕ್ಷಮ್ಯ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಕಾರಣ ಕೇಳಿ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ. ತಪ್ಪೆಸಗಿರುವ ಇವರಿಬ್ಬರಿಗೆ ಆರು ತಿಂಗಳಲ್ಲಿ ಚಾಮುಂಡೇಶ್ವರಿ ಶಿಕ್ಷೆ ನೀಡುತ್ತಾಳೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಚಂದನ್‌ ಶೆಟ್ಟಿ ಪ್ರತಿಕ್ರಿಯಿಸಿ, ‘ಕೇವಲ 5 ನಿಮಿಷ ತೆಗೆದುಕೊಂಡು ಅಷ್ಟೆ. ಮನರಂಜನೆ ಉದ್ದೇಶಕ್ಕೆ ಈ ರೀತಿ ಮಾಡಿದೆ. ಇದು ನಿಶ್ಚಿತಾರ್ಥ ಅಲ್ಲ. ಸಂಘಟಕರ ಅನುಮತಿ ಪಡೆದಿರಲಿಲ್ಲ. ವೇದಿಕೆ ದುರುಪಯೋಗ ಆಗಿದ್ದರೆ ಸರ್ಕಾರದ ಕ್ಷಮೆಯಾಚಿಸುತ್ತೇನೆ‍. ಶಿಷ್ಟಾಚಾರ ಗೊತ್ತಿರಲಿಲ್ಲ. ಗೊತ್ತಿಲ್ಲದೆ ಆಗಿರುವ ಪ್ರಮಾದ’ ಎಂದರು.

**

ವೇದಿಕೆ ದುರ್ಬಳಕೆ ಆಗಿರುವುದು ನಿಜ. ಅನುಮತಿ ಕೂಡ ಪಡೆದಿರಲಿಲ್ಲ. ಚಂದನ್‌ ಶೆಟ್ಟಿ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೋಟಿಸ್‌ ನೀಡಿದ್ದಾರೆ
-ಅಭಿರಾಂ ಜಿ.ಶಂಕರ್‌, ಜಿಲ್ಲಾಧಿಕಾರಿ, ದಸರಾ ವಿಶೇಷಾಧಿಕಾರ

**
ಸಾರ್ವಜನಿಕವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಇದರಿಂದ ಮೈಸೂರಿನ ಘನತೆ ಕುಗ್ಗುವುದಿಲ್ಲ.
-ಪ್ರತಾಪಸಿಂಹ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.