ADVERTISEMENT

ಚಿಂತಾಮಣಿ ಬಳಿ ಜೀಪ್ ಲಾರಿ ಡಿಕ್ಕಿ: ಎಂಟು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 17:04 IST
Last Updated 12 ಸೆಪ್ಟೆಂಬರ್ 2021, 17:04 IST
ಅಪಘಾತದ ದೃಶ್ಯ
ಅಪಘಾತದ ದೃಶ್ಯ    

ಚಿಂತಾಮಣಿ (ಚಿಕ್ಕಬಳ್ಳಾಪುರ): ಚಿಂತಾಮಣಿ–ಮದನಪಲ್ಲಿ ರಸ್ತೆಯ ಮರಿನಾಯಕನಹಳ್ಳಿ ಬಳಿ ಭಾನುವಾರ ಸಿಮೆಂಟ್ ಲಾರಿ ಮತ್ತು ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.

ಆರು ಜನ ಅಪಘಾತದ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ 17 ಮಂದಿ ಗಾಯಗೊಂಡಿದ್ದು, ಕೋಲಾರ ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಚಿಂತಾಮಣಿ ತಾಲ್ಲೂಕಿನ ನಾರಾಯಣಸ್ವಾಮಿ, ಮುನಿರತ್ನಮ್ಮ, ವೆಂಕಟಲಕ್ಷ್ಮಮ್ಮ, ಮುನಿಕೃಷ್ಣ, ನಿಖಿಲ್,ಜೀ‍ಪ್‌ ಚಾಲಕ ಮತ್ತು ಮಾಲೀಕ ರಮೇಶ್, ಬೆಂಗಳೂರು ನಿವಾಸಿಗಳಾದ ರಾಜಪ್ಪ ಮತ್ತು ಮೋನಿಕಾ ದಂಪತಿ ಮೃತಪಟ್ಟವರು.

ADVERTISEMENT

ಸಿಮೆಂಟ್ ಲಾರಿ ಚಿಂತಾಮಣಿಯಿಂದ ಮದನಪಲ್ಲಿ ಕಡೆಗೆ ಸಾಗುತ್ತಿತ್ತು. ಪ್ರಯಾಣಿಕರನ್ನು ತುಂಬಿಕೊಂಡಿದ್ದ ಜೀಪ್‌ ತಾಡಿಗೋಳ್ ಕ್ರಾಸ್‌ನಿಂದ ಚಿಂತಾಮಣಿಗೆ ಸಾಗುತ್ತಿತ್ತು. ಈ ವೇಳೆ ಲಾರಿ ಡಿಕ್ಕಿ ಹೊಡೆದಿದೆ.

ಜೀಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಜೀಪ್‌ನಲ್ಲಿ ಅಂದಾಜು 25 ಪ್ರಯಾಣಿಕರಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಪಘಾತದ ರಭಸಕ್ಕೆ ಶವಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ನಂತರ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರದ ಗಡಿಭಾಗವಾದ ತಾಡಿಗೋಳ್ ಕ್ರಾಸ್, ಗೌನಿಪಲ್ಲಿ, ಶ್ರೀನಿವಾಸಪುರ ಭಾಗದಲ್ಲಿಜೀಪ್‌ಗಳಲ್ಲಿ ಪ್ರಯಾಣಿಕರನ್ನು ಕುರಿಗಳಂತೆ ತುಂಬಲಾಗುತ್ತದೆ. ಇದೇ ಇಷ್ಟೊಂದು ಸಾವು ನೋವಿಗೆ ಕಾರಣವಾಗಿದೆ. ಪೊಲೀಸರು ಮತ್ತು ಆರ್‌ಟಿಒ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ಅಪಘಾತದ ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಶಾಸಕರಾದ ಎಂ.ಕೃಷ್ಣಾರೆಡ್ಡಿ, ಕೆ.ಆರ್.ರಮೇಶ್ ಕುಮಾರ್, ಕೆ.ವೈ.ನಂಜೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.