ADVERTISEMENT

ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಬೆಂಗಳೂರಲ್ಲೇ ಹೆಚ್ಚು; ಮೈಸೂರಿಗೆ 2ನೇ ಸ್ಥಾನ

ಶಿವಮೊಗ್ಗ 3ನೇ ಸ್ಥಾನ

ಕೆ.ನರಸಿಂಹ ಮೂರ್ತಿ
Published 17 ಡಿಸೆಂಬರ್ 2024, 23:54 IST
Last Updated 17 ಡಿಸೆಂಬರ್ 2024, 23:54 IST
<div class="paragraphs"><p>ಬಾಲನ್ಯಾಯ ಮಂಡಲಿ</p></div>

ಬಾಲನ್ಯಾಯ ಮಂಡಲಿ

   

ಮೈಸೂರು: ರಾಜ್ಯದಲ್ಲಿ 2020ರಿಂದ 2023ರವರೆಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಲ್ಲಿ ಹೆಚ್ಚಿನವರು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಇದ್ದಾರೆ. ಇಂತಹ 1,665 ಮಕ್ಕಳಿರುವ ಬೆಂಗಳೂರು ಬಿಟ್ಟರೆ, ಸಾಂಸ್ಕೃತಿಕ ರಾಜಧಾನಿಯಾದ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಶಿವಮೊಗ್ಗ 3ನೇ ಸ್ಥಾನದಲ್ಲಿದೆ.

ನಾಲ್ಕು ವರ್ಷಗಳ ಅವಧಿಯಲ್ಲಿ, ವರ್ಷದಿಂದ ವರ್ಷಕ್ಕೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಬಾಲಕಿಯರ ಸಂಖ್ಯೆ ಕಳೆದ ಎರಡು ವರ್ಷಗಳಿಂದ ಹೆಚ್ಚಿಲ್ಲ. ಮೂರಂಕಿ ದಾಟಿಲ್ಲ. ಒಟ್ಟಾರೆ 8,941 ಬಾಲಕರು ಹಾಗೂ 930 ಬಾಲಕಿಯರಿದ್ದಾರೆ.

ADVERTISEMENT

ನಗರದ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕಿನಡಿ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧ ದಾಖಲಾತಿ ವಿಭಾಗವು ಈ ಅಂಕಿ ಅಂಶವನ್ನು ನೀಡಿದೆ. ರಾಜ್ಯದ 31 ಜಿಲ್ಲೆಗಳು, ಪ್ರಮುಖ ನಗರಗಳು, ಸಿಐಡಿ, ಕರಾವಳಿ ಭದ್ರತಾ ಪಡೆ, ರಾಜ್ಯ ರೈಲ್ವೆಯಲ್ಲಿ ದಾಖಲಾಗಿರುವ ಪ್ರಕರಣಗಳೂ ಇದರಲ್ಲಿ ಸೇರಿವೆ. ಈ ಮಕ್ಕಳಲ್ಲಿ ಬಾಲಕಿಯರಿಗಿಂತ ಬಾಲಕರೇ ಹೆಚ್ಚಿದ್ದಾರೆ.

ಮೈಸೂರು, ಶಿವಮೊಗ್ಗದಲ್ಲಿ 400ಕ್ಕೂ ಹೆಚ್ಚು ಮಕ್ಕಳಿದ್ದರೆ, ತುಮಕೂರು, ಚಿತ್ರದುರ್ಗ, ಬೆಳಗಾವಿ, ತುಮಕೂರು, ಮತ್ತು ಬೆಂಗಳೂರು ಜಿಲ್ಲೆ, ಬೀದರ್‌, ಚಿಕ್ಕಮಗಳೂರಿನಲ್ಲಿ 300ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇವನ್ನು ಬಿಟ್ಟರೆ, ಬಹುತೇಕ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿದ್ದಾರೆ. ಸಿಐಡಿಯಲ್ಲಿ ಕೇವಲ ಒಂದು ಪ್ರಕರಣ ದಾಖಲಾಗಿದ್ದು, ಒಬ್ಬ ಬಾಲಕನಿದ್ದಾನೆ. ರಾಜ್ಯ ರೈಲ್ವೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹತ್ತು ಮಕ್ಕಳಿದ್ದಾರೆ. ಕರಾವಳಿ ಭದ್ರತಾ ಪಡೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿ ಸಿದ ಸಂಸ್ಥೆಯ ನಿರ್ದೇಶಕ ಎಂ.ಎಲ್‌.ಪರಶುರಾಂ, ‘ಅಂಕಿ ಅಂಶಗಳು, ಸಮಾಜದ ಆರೋಗ್ಯ ಹದಗೆಡುತ್ತಿರುವುದರ ಸೂಚನೆಯಂತೆ ಕಾಣುತ್ತವೆ. ಮಕ್ಕಳು ಹೆಚ್ಚಿನ ಮಟ್ಟದಲ್ಲಿ ಅಪರಾಧ ಜಗತ್ತಿಗೆ ತೆರೆದು ಕೊಳ್ಳುತ್ತಿರುವುದನ್ನು ಎಚ್ಚರಿಕೆಯ ಗಂಟೆ ಎಂದೇ ಸರ್ಕಾರ ಭಾವಿಸಬೇಕು’ ಎಂದು ಪ್ರತಿಪಾದಿಸಿದರು.

‘ಅಪರಾಧ ಜಗತ್ತಿನಲ್ಲಿ ಮಕ್ಕಳು ಕಾಣಬಾರದು. ಆದರೆ, ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ನ್ಯಾಯಾಲಯಗಳು, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿಗಳು ಸಮಾಜದಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಪೋಷಕರ ಸಾಲ, ಟಿವಿ ಮಾಧ್ಯಮಗಳು, ಮೊಬೈಲ್‌ ಫೋನ್ ದುರ್ಬಳಕೆಯು ಮಕ್ಕಳನ್ನು ಕೆಟ್ಟದಾಗಿ ಬೆಳೆಯಲು ಪ್ರೇರೇಪಿಸುತ್ತಿದೆ. ಏಕಪೋಷಕ ಕುಟುಂಬ, ವ್ಯಸನಿಗಳ ಕುಟುಂಬ, ಬಡ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಮಕ್ಕಳು–ಪೋಷಕರಿಗೆ ಆಪ್ತಸಮಾಲೋಚನೆ ಅಗತ್ಯ. ಮಕ್ಕಳು ತಪ್ಪು ಮಾಡಿದಾಗ ತಿದ್ದಬೇಕು. ದಂಡಿಸಬಾರದು‌’ ಎಂದು ಹೇಳಿದರು.

ದರೋಡೆ, ಅತ್ಯಾಚಾರ, ಕೊಲೆಯಂಥ ಪ್ರಕರಣಗಳು ಮಕ್ಕಳ ಮೇಲೆ ದಾಖಲಾಗುತ್ತಿವೆ. ಅವರನ್ನು ಅಪರಾಧ ಜಗತ್ತಿನಿಂದ ದೂರ ತರುವ ಪ್ರಯತ್ನ ತುರ್ತಾಗಿ ಆಗಬೇಕು.
–ಎಂ.ಎಲ್‌.ಪರಶುರಾಂ ‘ಒಡನಾಡಿ’ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.