ಬೆಂಗಳೂರು: ಪಡಿತರ ವಿತರಣೆಗೆ ಅಗತ್ಯವಿರುವ ರಾಗಿಯ ಪ್ರಮಾಣವನ್ನು ಅಧರಿಸಿ ರೈತರಿಂದ ಹೆಚ್ಚುವರಿ ರಾಗಿ ಖರೀದಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ನ ಎಚ್.ಡಿ. ರೇವಣ್ಣ, ಕೆ.ಎಂ. ಶಿವಲಿಂಗೇಗೌಡ ಮತ್ತಿತರರು, ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಸ್ಥಗಿತಗೊಂಡಿದೆ. ರೈತರು ರಾಗಿ ಚೀಲಗಳೊಂದಿಗೆ ಖರೀದಿ ಕೇಂದ್ರಗಳಲ್ಲಿ ಕಾಯುತ್ತಿದ್ದಾರೆ. ತಕ್ಷಣವೇ ರಾಗಿ ಖರೀದಿಸಬೇಕು’ ಎಂದು ಆಗ್ರಹಿಸಿದರು.
‘ಕೇಂದ್ರ ಸರ್ಕಾರ ಮಿತಿ ವಿಧಿಸಿದೆ ಎಂಬ ಕಾರಣಕ್ಕೆ ಈಗ ರೈತರಿಂದ ರಾಗಿ ಖರೀದಿ ನಿಲ್ಲಿಸಿರುವುದು ಸರಿಯಲ್ಲ. ಮತ್ತೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದು ಕಷ್ಟ. ರಾಜ್ಯ ಸರ್ಕಾರವೇ ಬಜೆಟ್ನಲ್ಲಿ ₹ 100 ಕೋಟಿ ಅನುದಾನ ಒದಗಿಸಿ, ರೈತರಿಂದ ರಾಗಿ ಖರೀದಿಸಬೇಕು’ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
ಬಳಿಕ ಉತ್ತರಿಸಿದ ಮುಖ್ಯಮಂತ್ರಿ, ‘ಹೆಚ್ಚುವರಿ ಪಡಿತರ ಧಾನ್ಯ ವಿತರಣೆಯನ್ನು ಕೇಂದ್ರ ಸರ್ಕಾರ ಎಂಟು ತಿಂಗಳು ವಿಸ್ತರಿಸಿದೆ. ಈಗ ಅಗತ್ಯವಿರುವಷ್ಟು ರಾಗಿಯನ್ನು ಖರೀದಿಸಲಾಗಿದೆ. ಇನ್ನು ಎಷ್ಟು ಬೇಕಾಗಬಹುದು ಎಂಬುದನ್ನು ಪರಿಶೀಲಿಸಿ, ರೈತರ ಬಳಿ ಇರುವ ರಾಗಿ ಖರೀದಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.