ADVERTISEMENT

ನೂತನ ಸಚಿವರಿಗೆ ಗಂಟೆಯೊಳಗೆ ಖಾತೆ ಹಂಚಿಕೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 5:32 IST
Last Updated 7 ಆಗಸ್ಟ್ 2021, 5:32 IST
   

ಬೆಂಗಳೂರು: ‘ನೂತನ ಸಚಿವರಿಗೆ ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಬಹುತೇಕ ಇನ್ನು ಒಂದು ಗಂಟೆಯ ಒಳಗೆ ನೂತನ ಸಚಿವರಿಗೆ ಖಾತೆ ಹಂಚಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಆರ್.ಟಿ. ನಗರದಲ್ಲಿರುವ ತರಳುಬಾಳು ಮಠಕ್ಕೆ ಶನಿವಾರ ತೆರಳಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ದಾವಣಗೆರೆ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಅವರು ಉಪಸ್ಥಿತರಿದ್ದರು.

ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ಯಾರೂ ಯಾವುದೇ ಖಾತೆಗೂ ಪಟ್ಟು ಹಿಡಿದಿಲ್ಲ. ನಾನು ಅದೃಷ್ಟವಂತ ಮುಖ್ಯಮಂತ್ರಿ. ಸಚಿವ ಸಂಪುಟದವರು ಯಾರೂ ಪ್ರಭಾವ ಬೀರಿಲ್ಲ. ಕೆಲವರು ಇಂಥ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆಯೇ ಹೊರತು ಯಾರ ಒತ್ತಡವೂ ಇಲ್ಲ’ ಎಂದರು.

ADVERTISEMENT

‘ಕೋವಿಡ್‌ ಸಭೆಯ ಬಳಿಕ ವಚನಾನಂದ ಸ್ವಾಮೀಜಿ ಭೇಟಿ ಮತ್ತು ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ತಡವಾಗಿ ಬಂದೆ. ಹೀಗಾಗಿ, ಖಾತೆ ಹಂಚಿಕೆ ಸಾಧ್ಯ ಆಗಿಲ್ಲ. ರಾತ್ರಿ ತಡವಾಗಿ ಖಾತೆ ಹಂಚಿಕೆ ಮಾಡಬೇಡಿ ಎಂದು ಕೆಲವು ಸಲಹೆ ನೀಡಿದರು. ಹೀಗಾಗಿ ಮಾಡಿಲ್ಲ’ ಎಂದು ಸಮರ್ಥನೆ ನೀಡಿದರು.

‘ಕೋವಿಡ್‌ ಬಗ್ಗೆ ಹಲವು ನಿರ್ಧಾರಗಳನ್ನು ಮಾಡಿದ್ದೇವೆ. ಅಧಿಕಾರಿಗಳಿಗೆ ಸೂಚನೆ ಕೊಟ್ಟು ಅತ್ಯಂತ ದಕ್ಷತೆಯಿಂದ ನಿರ್ಧಾರಗಳನ್ನು ಕಾರ್ಯಗತಗೊಳಿಸುವಂತೆ ತಿಳಿಸಿದ್ದೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.