ADVERTISEMENT

ಆಗ ಚಾಯ್‌ವಾಲಾ ಎಂದ ಮೋದಿ ಈಗ ಚೌಕೀದಾರ ಎಂದು ಜನರ ಹಾದಿ ತಪ್ಪಿಸುತ್ತಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 20:31 IST
Last Updated 18 ಏಪ್ರಿಲ್ 2019, 20:31 IST
ಕುಮಟಾದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಅಭ್ಯರ್ಥಿ ಆನಂದ ಅಸ್ನೋಟಿಕರ್ ಚಿತ್ರದಲ್ಲಿದ್ದಾರೆ.
ಕುಮಟಾದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಅಭ್ಯರ್ಥಿ ಆನಂದ ಅಸ್ನೋಟಿಕರ್ ಚಿತ್ರದಲ್ಲಿದ್ದಾರೆ.   

ಕುಮಟಾ (ಉತ್ತರ ಕನ್ನಡ): ‘ನರೇಂದ್ರ ಮೋದಿ ಕಳೆದ ಬಾರಿ ಬಾರಿ ಚಾಯ್‌ವಾಲಾ ಎಂದರು; ಈ ಬಾರಿ ಚೌಕಿದಾರ್ ಎನ್ನುತ್ತಿದ್ದಾರೆ. ಈ ರೀತಿ ಯುವಕರನ್ನು ಹಾದಿ ತಪ್ಪಿಸಿ, ಬೀದಿಯಲ್ಲಿ ನಿಲ್ಲಿಸಿ ತಮ್ಮ ಬೇಳೆ ಬೇಯಿಸಿಕೊಂಡರು.ಈ ಬಾರಿ ಕೇಂದ್ರದಲ್ಲಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ಉತ್ತರ ಕನ್ನಡದಿಂದ ಮೈತ್ರಿಕೂಟದ ಪರ ಅಭ್ಯರ್ಥಿ, ಜೆಡಿಎಸ್‌ನ ಆನಂದ ಅಸ್ನೋಟಿಕರ್ ಪರ ಗುರುವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.

‘ಮೋದಿ ಮುಖ ನೋಡಿ ಮತ ನೀಡಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ.ಮೋದಿಈ ಜಿಲ್ಲೆಗೆ, ರಾಜ್ಯಕ್ಕೆ ಏನು ಕೊಟ್ಟಿದ್ದಾರೆ? ಈ ಜಿಲ್ಲೆಯ ಬುದ್ಧಿವಂತ ಮತದಾರರು ಬಿಜೆಪಿಯ ಅಭ್ಯರ್ಥಿಯನ್ನು ಇಷ್ಟು ವರ್ಷ ಹೇಗೆ ಆಯ್ಕೆ ಮಾಡಿದ್ದೀರಿ? ನಿಮ್ಮ ಕಷ್ಟಗಳಿಗೆ ಅವರು ಎಷ್ಟುಸ್ಪಂದಿಸಿದ್ದಾರೆ? ಯಾವತ್ತಾದರೂ ಅವರನ್ನುಪ್ರಶ್ನಿಸಿದ್ದೀರಾ?’ ಎಂದು ಕೇಳಿದರು.

ADVERTISEMENT

ಇದಕ್ಕೂ ಮೊದಲು ಕೊಂಕಣ ಎಜುಕೇಶನ್ ಟ್ರಸ್ಟ್‌ನ ಮೈದಾನದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿ,‘ಎರಡು ತಿಂಗಳಿನಿಂದ ದೃಶ್ಯ ಮಾಧ್ಯಮದಲ್ಲಿ ಸುಮಲತಾ, ಮಂಡ್ಯವನ್ನು ಮಾತ್ರ ತೋರಿಸುತ್ತಿದ್ದರು. ಹೀಗಾಗಿ ಜನರ ಮನಸ್ಸಿನಿಂದ ನರೇಂದ್ರ ಮೋದಿ ಕಳೆದುಹೋಗಿದ್ದಾರೆ.ಬಿಜೆಪಿಯವರು ಮೋದಿ ಫೋಟೋ ಇಟ್ಟುಕೊಂಡು ಮತ ಕೇಳಲು ಹೋಗುವಂತಾಗಿದೆ’ ಎಂದು ಹೇಳಿದರು.

ಮತ್ತೆ ಗ್ರಾಮ ವಾಸ್ತವ್ಯ: ತಮ್ಮ ಆರೋಗ್ಯ ಸಮಸ್ಯೆಯನ್ನು ಮತ್ತೊಮ್ಮೆ ಉಲ್ಲೇಖಿಸಿದ ಕುಮಾರಸ್ವಾಮಿ, ‘ನನ್ನ ಆರೋಗ್ಯದ ಸ್ಥಿತಿ ಏನೇ ಇರಲಿ, ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಅನಂತ ಕುಮಾರ್‌ ಹೆಗಡೆ ಎಲ್ಲಿದ್ದೀಯಪ್ಪಾ?:‘ಏ.18ರ ನಂತರ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುವಂಥ ಸ್ಥಿತಿ ಬರಲಿದೆ ಎಂದು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಟ್ರೋಲ್ ಮಾಡಿ ಅವಹೇಳನ ಮಾಡುತ್ತಿದ್ದಾರೆ. ಅವನು ಚುನಾವಣೆಯಲ್ಲಿ ಗೆಲ್ಲುತ್ತಾನೆ. ಅದೇರೀತಿ, ಈಗ ಆನಂದ್ ಎಲ್ಲಿದ್ದೀಯಪ್ಪಾ ಎಂದು ಹೇಳುತ್ತಿದ್ದಾರೆ. ಏ.23ರ ನಂತರ ಅನಂತಕುಮಾರ ಹೆಗಡೆ ಎಲ್ಲಿದ್ದೀಯಪ್ಪಾ ಎಂದು ಕೇಳಬೇಕಾಗುತ್ತದೆ’ ಎಂದುತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.