ADVERTISEMENT

ಗೂಗಲ್‌ ಗುರು, ಶಿಕ್ಷಕರ ಮಧ್ಯೆ ಸ್ಪರ್ಧೆ: ಬೊಮ್ಮಾಯಿ

ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 22:44 IST
Last Updated 5 ಸೆಪ್ಟೆಂಬರ್ 2022, 22:44 IST
   

ಬೆಂಗಳೂರು: ತಂತ್ರಜ್ಞಾನ ವಿಶ್ವವನ್ನೇ ಆಳುತ್ತಿದೆ. ಬದಲಾದ ಜಗತ್ತಿನಲ್ಲಿ ಬುದ್ಧಿಜೀವಿಗಳಾದ ಪ್ರಾಧ್ಯಾಪಕರೂ ಗೂಗಲ್‌ ಗುರುವಿನ ಸ್ಪರ್ಧೆ ಎದುರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೋಮವಾರ ಇಲ್ಲಿ ಆಯೋ ಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯರ ಮೌಲ್ಯಗಳೂ ತಂತ್ರಜ್ಞಾನದಿಂದಲೇ ನಿರ್ದೇಶಿತವಾಗುತ್ತಿವೆ. ವಿಜ್ಞಾನ, ತಂತ್ರಜ್ಞಾನದ ಜತೆಗೆ ನೈತಿಕ ಮೌಲ್ಯಗಳು ಬೆರೆತಾಗ ಸನ್ಮಾರ್ಗದ ಉನ್ನತಿ ಸಾಧ್ಯವಾಗುತ್ತದೆ. ಹಾಗಾಗಿ, ಶಿಕ್ಷಕರು ಜೀವನಕ್ಕೆ ಹತ್ತಿರವಾದ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು. ಬೋಧನೆಯನ್ನು ಬದುಕಿನ ಜತೆ ಬೆಸೆಯಬೇಕು. ಚಿಂತನಾ ಪ್ರಕ್ರಿಯೆಗೆ ಶಿಸ್ತು, ಮಕ್ಕಳ ಮುಗ್ಧತೆ ಮತ್ತು ಕುತೂ ಹಲ ಉಳಿಸಿಕೊಳ್ಳುವುದೇ ಈಗಿರುವ ಸವಾಲು ಎಂದು ಪ್ರತಿಪಾದಿಸಿದರು.

ADVERTISEMENT

ಮೂರು ವರ್ಷಗಳ ಪರಿಶ್ರಮದಿಂದ ರೂಪಿಸಿರುವ ಎನ್ಇಪಿ ಪಠ್ಯಕ್ರಮ ಜಾರಿಯಲ್ಲಿ ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸಬೇಕು. ಪರಿಣತರು, ವಿಷಯ ತಜ್ಞರು, ಉದ್ಯಮಿಗಳು ಒಂದೆಡೆ ಕೂತು ಪಠ್ಯಗಳನ್ನು ರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯ ಸರ್ಕಾರ ಹೊಸ ಕಾಲೇಜುಗಳಿಗೆ ಅನುಮತಿ ನೀಡುತ್ತಿಲ್ಲ. ಇರುವ ಕಾಲೇಜುಗಳಲ್ಲೇ ಶಿಕ್ಷಣದ ಗುಣಮಟ್ಟ ಹೆಚ್ಚಿಸುತ್ತಿದೆ. ಉನ್ನತ ಶಿಕ್ಷಣದಲ್ಲಿ ವಿಕೇಂದ್ರೀಕರಣ, ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ತರಲು ಸದ್ಯದಲ್ಲೇ ಸೂಕ್ತ ಶಾಸನ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಇದ್ದ ವಿಐಪಿ ಸಂಸ್ಕೃತಿ ಕೊನೆಗೊಳಿಸಿ, ಪ್ರತಿಭೆಗೆ ಮನ್ನಣೆ ಕೊಡಲಾಗುತ್ತಿದೆ. ಪದವಿ ಕಾಲೇಜು ಅಧ್ಯಾಪಕರಿಗೂ ಪ್ರಾಧ್ಯಾಪಕ ಸ್ಥಾನ ನೀಡಲಾಗುತ್ತಿದ್ದು, ಕುಲಪತಿಗಳಾಗುವ ಅವಕಾಶ ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯಗಳ ಆಡಳಿತದಲ್ಲೂ ಪಾರದರ್ಶಕತೆ ತರಲಾಗಿದೆ ಎಂದು ವಿವರ ನೀಡಿದರು. ಗದಗಿನ ರಾಮಕೃಷ್ಣ- ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಮಹಾರಾಜ್ ಆಶಯ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.