ಈಶ್ವರ ಖಂಡ್ರೆ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ಕಾಫಿ ತೋಟಗಳ ಮಾಲೀಕರು ಕಾರ್ಮಿಕರನ್ನು ತೋಟಕ್ಕೆ ಕಳುಹಿಸಿದರೆ ಅಂತಹವರಿಗೆ ಎಚ್ಚರಿಕೆ ನೀಡಿ, ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಆನೆ ದಾಳಿಯಿಂದ 7 ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೊ ಸಂವಾದದ ಮೂಲಕ ತುರ್ತು ಸಭೆ ನಡೆಸಿದರು.
‘ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ, ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಕ್ಕೆ ಹೋಗದಂತೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ’ ಎಂದು ತಿಳಿಸಿದರು.
ಇಲಾಖೆ ಮಾಹಿತಿ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಗೆ 35 ಆನೆಗಳು 3 ಗುಂಪಿನಲ್ಲಿ ಸಂಚರಿಸುತ್ತಿದ್ದು, ಬೇಸಿಗೆಯಲ್ಲಿ ಅವುಗಳು ಕಾಡಿನಿಂದ ಹೊರಬರುವುದು ಸಾಮಾನ್ಯ. ಆದಾಗ್ಯೂ ಸಿಬ್ಬಂದಿ ಮತ್ತು ಅಧಿಕಾರಿಗಳು ವನ್ಯಜೀವಿ–ಮಾನವ ಸಂಘರ್ಷ ಆಗದಂತೆ ನಿಗಾ ಇಡಬೇಕು. ಪ್ರತಿ ವರ್ಷ ವನ್ಯಜೀವಿ– ಮಾನವ ದಾಳಿಯಲ್ಲಿ ಆಗುತ್ತಿರುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು, ಹೆಚ್ಚಳ ಆಗಬಾರದು ಎಂದರು.
ಬೇಸಿಗೆಯ ಕಾರಣ ಮುಂದಿನ 2–3 ತಿಂಗಳು ಅತ್ಯಂತ ಕ್ಲಿಷ್ಟಕರವಾಗಿದ್ದು, ಹಿರಿಯ ಅಧಿಕಾರಿಗಳು ವನ್ಯಜೀವಿ– ಮಾನವ ಸಂಘರ್ಷ ಇರುವ ಪ್ರದೇಶಕ್ಕೆ ತೆರಳಿ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಎಂದು ಖಂಡ್ರೆ ಸೂಚಿಸಿದರು.
ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳಿಗೆ ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸಲು ಕ್ರಮ ವಹಿಸಬೇಕು. ವನ್ಯಜೀವಿ–ಮಾನವ ಸಂಘರ್ಷ ಇರುವ ಪ್ರದೇಶಗಳ ಸ್ಥಳೀಯ ಮುಖಂಡರ, ಗ್ರಾಮಗಳ ಜಮೀನು ಮಾಲೀಕರ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ ಮಾಹಿತಿ ಪ್ರಸಾರ ಮಾಡಬೇಕು ಎಂದೂ ಸಲಹೆ ನೀಡಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಘಟನೆ ಮರುಕಳಿಸದಂತೆ 24x7 ನಿಗಾ ಇಡಬೇಕು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸೆರೆ ಕಾರ್ಯಾಚರಣೆ ನಡೆಸಬೇಕು. ಅತ್ಯಾಧುನಿಕ ಸಲಕರಣೆಗಳಾದ ಥರ್ಮಲ್ ಡ್ರೋನ್ ಬಳಕೆ ಮಾಡಬೇಕು ಎಂದು ಖಂಡ್ರೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.