ADVERTISEMENT

ಕೃಷ್ಣ ಮೇಲ್ದಂಡೆಗೆ ಅನುದಾನ: ಕಾಂಗ್ರೆಸ್‌–ಬಿಜೆಪಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 16:23 IST
Last Updated 12 ಜುಲೈ 2018, 16:23 IST
ಗುರುವಾರ ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್‌ನ ಎಂ.ಬಿ. ಪಾಟೀಲ, ಸಿದ್ದರಾಮಯ್ಯ, ಬಿಜೆಪಿಯ ಬಸವರಾಜ ಪಾಟೀಲ ಯತ್ನಾಳ ಹಾಗೂ ಬಸವರಾಜ ಬೊಮ್ಮಾಯಿ ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದರು  -ಪ್ರಜಾವಾಣಿ ಚಿತ್ರ
ಗುರುವಾರ ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್‌ನ ಎಂ.ಬಿ. ಪಾಟೀಲ, ಸಿದ್ದರಾಮಯ್ಯ, ಬಿಜೆಪಿಯ ಬಸವರಾಜ ಪಾಟೀಲ ಯತ್ನಾಳ ಹಾಗೂ ಬಸವರಾಜ ಬೊಮ್ಮಾಯಿ ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದರು  -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗುರುವಾರ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ಬಜೆಟ್‌ ಮೇಲಿನ ಚರ್ಚೆ ವೇಳೆ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ಈ ಯೋಜನೆಯ ಅನುಷ್ಠಾನಕ್ಕೆ ಪ್ರತಿ ವರ್ಷ ₹10 ಸಾವಿರ ಕೋಟಿ ಮೀಸಲಿಡಲಾಗುತ್ತದೆ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ, ನುಡಿದಂತೆ ನಡೆದಿಲ್ಲ’ ಎಂದು ಟೀಕಿಸಿದರು. ಇದನ್ನು ಕಾಂಗ್ರೆಸ್‌ ಸದಸ್ಯರು ಅಲ್ಲಗಳೆದರು. ‘ಈ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲೇ ಇದೆ’ ಎಂದು ಬಿಜೆಪಿಯ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಹೇಳಿದರು.

‘ಪ್ರಣಾಳಿಕೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಒಂದು ಪುಸ್ತಕದಲ್ಲಿ ಮುದ್ರಣ ದೋಷದಿಂದಾಗಿ ಈ ಅಂಶ ಬಂದಿದೆ. ಅದನ್ನು ಸರಿಪಡಿಸಿದ್ದೇವೆ’ ಎಂದು ಕಾಂಗ್ರೆಸ್‌ನ ಎಂ.ಬಿ.‍ಪಾಟೀಲ ಸಮಜಾಯಿಷಿ ನೀಡಿದರು. ‘ಜನರಿಗೆ ಭರವಸೆ ನೀಡಲು ಒಂದು ಪ್ರಣಾಳಿಕೆ ಹಾಗೂ ಅನುಷ್ಠಾನಕ್ಕೆ ಇನ್ನೊಂದು ಪ್ರಣಾಳಿಕೆ ಸಿದ್ಧಪಡಿಸಿಕೊಂಡಿದ್ದೀರಾ. ಪದೇ ಪದೇ ಬಣ್ಣ ಬದಲಿಸಬೇಡಿ’ ಎಂದು ಬಿಜೆಪಿ ಸದಸ್ಯರು ಛೇಡಿಸಿದರು.

ADVERTISEMENT

ಯಾರು ಏನೆಂದರು?
ಈ ಯೋಜನೆಗೆ ₹10 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಹೇಳಿಲ್ಲ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಐದು ವರ್ಷಗಳಲ್ಲಿ ₹50 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿದ್ದೆವು. ಐದು ವರ್ಷಗಳಲ್ಲಿ ₹58 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ. ₹47 ಸಾವಿರ ಕೋಟಿಯ ಕೆಲಸ ಆಗಿದೆ. ಬಿಜೆಪಿ ಅವಧಿಯಲ್ಲಿ ನೀರಾವರಿಗೆ ₹18 ಸಾವಿರ ಕೋಟಿಯಷ್ಟೇ ಖರ್ಚು ಮಾಡಲಾಗಿತ್ತು.

ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ₹47 ಸಾವಿರ ಕೋಟಿ ಸಾಕು ಎಂದು ನಮ್ಮ ಅವಧಿಯಲ್ಲಿ ಅಂದಾಜಿಸಲಾಗಿತ್ತು. ಆ ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಸಿಕ್ಕಿತ್ತು. ಇದರ ಅನುಷ್ಠಾನಕ್ಕೆ ₹50 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದರು.
ಬಸವರಾಜ ಬೊಮ್ಮಾಯಿ, ಬಿಜೆಪಿ ಶಾಸಕ

***
ನಮ್ಮ ಪ್ರಣಾಳಿಕೆಯ ಘೋಷಣೆಯಂತೆ ನಡೆದುಕೊಂಡಿದ್ದೇವೆ. ನೀರಾವರಿ ಯೋಜನೆಗಳಿಗೆ ₹47,500 ಕೋಟಿ ಖರ್ಚು ಮಾಡಿದ್ದೇವೆ.
ಎಂ.ಬಿ.ಪಾಟೀಲ, ಮಾಜಿ ಜಲಸಂಪನ್ಮೂಲ ಸಚಿವ, ಕಾಂಗ್ರೆಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.