ADVERTISEMENT

ಕಾಂಗ್ರೆಸ್ ಸತ್ತು ಹೋಗಿದೆ: ಅಮಿನ್‌ಮಟ್ಟು

ಭಕ್ತರ ಬಗ್ಗೆ ಪಿ.ಎಚ್‌ಡಿ ಅಧ್ಯಯನ ನಡೆಯಬೇಕು; ಕಮ್ಯುನಿಸ್ಟ್‌ ನೆಲೆಯ ಪಶ್ಚಿಮ ಬಂಗಾಳ–ಕೇರಳದಲ್ಲೂ ಬಿಜೆಪಿ..!

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:45 IST
Last Updated 23 ಜೂನ್ 2019, 19:45 IST
ದಿನೇಶ್‌ ಅಮಿನ್‌ಮಟ್ಟು
ದಿನೇಶ್‌ ಅಮಿನ್‌ಮಟ್ಟು   

ಮೈಸೂರು: ‘ಕಾಂಗ್ರೆಸ್‌ ಸತ್ತು ಹೋಗಬೇಕು’ ಎಂದು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ನನ್ನ ಬಳಿ ಹೇಳಿದ್ದರು. ಈಗಾಗಲೇ ಕಾಂಗ್ರೆಸ್‌ ಸತ್ತು ಹೋಗಿದೆ ಎಂಬುದು ಸಾಮಾನ್ಯ ರಾಜಕೀಯ ಜ್ಞಾನ ಹೊಂದಿರುವ ಎಲ್ಲರಿಗೂ ಗೊತ್ತಾಗಿದೆ’ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಹೇಳಿದರು.

ಭಾನುವಾರ ನಡೆದ ‘ಪ್ರೊ.ಕೆ.ರಾಮದಾಸ್ ನೆನಪಿನಲಿ’ ಸಮಾರಂಭದಲ್ಲಿ ಮಾತನಾಡಿದರು.‘ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಇವಿಎಂ ಮತಯಂತ್ರ ಕಾರಣ. ಬಿಜೆಪಿಗರ ಬಳಿ ಅಪಾರ ದುಡ್ಡಿತ್ತು. ಜಾತಿ–ಧರ್ಮ ಬಳಸಿಕೊಂಡರು... ಎಂಬ ದೂರುಗಳ ಸರಮಾಲೆ ವ್ಯಕ್ತವಾಗುತ್ತಿದೆ. ಆದರೆ, ಸೋಲಿನ ಆತ್ಮಾವಲೋಕನ ಮಾತ್ರ ನಡೆದಿಲ್ಲ’ ಎಂದರು.

‘ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟವೇ ನಡೆಯಲಿಲ್ಲ. ದೇಶದಾದ್ಯಂತ ಎಲ್ಲರೂ ಸ್ವಾರ್ಥಕ್ಕಾಗಿ ಹೋರಾಡಿದರು. ಮೈಸೂರು, ತುಮಕೂರು, ಮಂಡ್ಯದಲ್ಲಿ ಯಾರು ಸೋತರೆ, ಯಾರಿಗೆ ಹೆಚ್ಚು ಖುಷಿ ಸಿಗಲಿದೆ ಎಂಬುದೇ ಮುಖ್ಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಕೂಡ ಎಡದಿಂದ ಬಲಕ್ಕೆ ವಾಲಿದರು. ಸಿದ್ಧಾಂತವಾದಿಗಳಾದ ಕಮ್ಯುನಿಸ್ಟರನ್ನೇ ಬಗ್ಗಿಸಿಕೊಂಡ ಮೇಲೆ ಉಳಿದವರು ಲೆಕ್ಕಕ್ಕಿಲ್ಲ. ಹೆಬ್ಬಾವಿನಂತೆ ಪ್ರಾದೇಶಿಕ ಪಕ್ಷಗಳನ್ನು ಬಿಜೆ‍ಪಿ ನುಂಗುತ್ತಿದೆ. ಮುಂದಿನ ದಿನಗಳಲ್ಲಿ ಕಮ್ಯುನಿಸ್ಟರ ನೆಲೆಗಳಾದ ಪಶ್ಚಿಮ ಬಂಗಾಳ, ಕೇರಳದಲ್ಲೂ ಮುಂಚೂಣಿಗೆ ಬರಲಿದೆ’ ಎಂದು ತಿಳಿಸಿದರು.

ADVERTISEMENT

‘ಮೌಢ್ಯ, ಧರ್ಮ ಪ್ರಸ್ತುತ ಉದ್ಯಮವಾಗಿದೆ. ಪೂಜಾ ಕೇಂದ್ರಗಳು ರಾಜಕೀಯ ಪಕ್ಷದ ಕಚೇರಿಗಳಾಗಿವೆ. ದೇವರು ಪ್ರಚಾರದ ಪೋಸ್ಟರ್‌ಗಳಾಗಿವೆ. ಯಕ್ಷಗಾನ–ಭೂತಕೋಲದಲ್ಲಿ ಭೂತಗಳು ಸಹ ಮೋದಿಗೆ ಮತ ಕೇಳಿದವು. ಕೋಮುವಾದ ರಾಜಕಾರಣ ವಿಜೃಂಭಿಸಿದ್ದು, ಸಾಹಿತ್ಯಿಕ–ಸಾಂಸ್ಕೃತಿಕ ರಾಜಕಾರಣ ತೆರೆಮರೆಗೆ ಸರಿದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಐಟಿ–ಬಿಟಿಯಲ್ಲಿರುವ ಭಕ್ತರ ನಾಲೆಡ್ಜ್‌ ಎಸ್ಸೆಸ್ಸೆಲ್ಸಿಯವರೆಗೂ ಮಾತ್ರವಿದೆ. ಉಳಿದ ಭಕ್ತರದ್ದೂಅಷ್ಟೇ ಆಗಿದೆ. ಪ್ರಸ್ತುತ ಪ್ರಶ್ನಿಸುವ ವಾತಾವರಣವೇ ಕಣ್ಮರೆಯಾಗಿದೆ. ಸಾಮ, ದಾನ, ಭೇದ, ದಂಡ ಪ್ರಯೋಗ ನಡೆದಿದೆ. ಕೋಮುವಾದದ ವಿರುದ್ಧ
ಶೇ63ರಷ್ಟು ಮತದಾರರಿದ್ದರೂ ಜಾತಿಯ ಭೇದ ಪ್ರಯೋಗ ಫಲ ನೀಡಿದೆ. ಇದು ಪಿಎಚ್‌ಡಿ ಅಧ್ಯಯನ ಮಾಡಲು ಸೂಕ್ತ ವಿಷಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.