ಬೆಂಗಳೂರು: ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗೋಧ್ರಾ ಮಾದರಿ ದುರ್ಘಟನೆಗೆ ಸಂಚು ನಡೆಯುತ್ತಿದೆ ಎಂಬ ಹೇಳಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ವಿಚಾರಣೆಗೆ ಸಿಸಿಬಿ ಪೊಲೀಸರು ಶುಕ್ರವಾರ ಬೆಳಿಗ್ಗೆ ಯತ್ನಿಸಿದರು.
ಕುಮಾರಕೃಪಾ ಅತಿಥಿಗೃಹದಲ್ಲಿದ್ದ ಹರಿಪ್ರಸಾದ್ ಅವರನ್ನು ಭೇಟಿಮಾಡಿದ ಸಿಸಿಬಿ ಎಸಿಪಿ ಮತ್ತು ಇತರ ಅಧಿಕಾರಿಗಳು, ಹಿಂದಿನ ಹೇಳಿಕೆ ಕುರಿತು ವಿವರಣೆ ದಾಖಲಿಸಿಕೊಳ್ಳಲು ಬಂದಿರುವುದಾಗಿ ತಿಳಿಸಿದರು. ವಿವರವಾದ ಹೇಳಿಕೆ ನೀಡುವಂತೆ ಕೋರಿದರು.
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹರಿಪ್ರಸಾದ್, 'ರಾಜ್ಯದ ಜನರ ಸುರಕ್ಷತೆ ದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ಈಗ ನನಗೆ ವಿವಿಐಪಿ ಆತಿಥ್ಯ ಬೇಕಿಲ್ಲ. ಪ್ರಕರಣ ದಾಖಲಿಸಿ, ವಾರೆಂಟ್ ತಂದು ಠಾಣೆಗೆ ಕರೆದೊಯ್ಯಿರಿ. ಅಲ್ಲಿಯೇ ವಿವರಣೆ ನೀಡುತ್ತೇನೆ' ಎಂದರು.
ಪೊಲೀಸರ ಕ್ರಮದ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, 'ವಿವರಣೆ ನೀಡಲು ಸಿದ್ದನಿದ್ದೇನೆ. ಮಂಪರು ಪರೀಕ್ಷೆಯನ್ನೂ ಮಾಡಲಿ. ನನಗೆ ಮಾತ್ರವಲ್ಲ ಬಿಜೆಪಿ ಅಧ್ಯಕ್ಷರನ್ನೂ ಕರೆಯಲಿ' ಎಂದರು.
'ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಯಾವುದೇ ಕ್ರಮವಿಲ್ಲ. ನನ್ನ ವಿಚಾರಣೆಗೆ ಪೊಲೀಸರು ಬಂದಿದ್ದಾರೆ. ಯಾವ ಸರ್ಕಾರದಲ್ಲಿ ನಾವು ಇದ್ದೇವೆ ಎಂಬ ಅನುಮಾನ ಮೂಡುತ್ತದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ದೀರ್ಘ ಕಾಲದಿಂದ ಪಕ್ಷಕ್ಕೆ ಕೆಲಸ ಮಾಡಿದ ನನಗೇ ಹೀಗಾದರೆ ಪಕ್ಷದ ಸಾಮಾನ್ಯ ಕಾರ್ಯಕರ್ತರ ಸ್ಥಿತಿ ಏನು' ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.