ADVERTISEMENT

ಗಂಡಸುತನಕ್ಕೆ ಸವಾಲು: ಸುಮ್ಮನಿರಲು ಸಾಧ್ಯವೇ: ಡಿ.ಕೆ. ಸುರೇಶ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 20:47 IST
Last Updated 4 ಜನವರಿ 2022, 20:47 IST
ಡಿ.ಕೆ.ಸುರೇಶ್
ಡಿ.ಕೆ.ಸುರೇಶ್   

ಬೆಂಗಳೂರು: ‘ನಾವು ಬಿಜೆಪಿಯವರು, ನಾವು ಮಾಡುವುದೇ ಹೀಗೆ. ಗಂಡಸಾದವರು ಬನ್ನಿ’ ಎಂದು ಮುಖ್ಯಮಂತ್ರಿಯ ಮುಂದೆ ಒಬ್ಬ ಮಂತ್ರಿ ಅನವಶ್ಯಕವಾಗಿ ಸವಾಲು ಹಾಕಿದಾಗ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ’ ಎಂದು ಸಂಸದ ಡಿ.ಕೆ. ಸುರೇಶ್‌ ಪ್ರಶ್ನಿಸಿದರು.

ರಾಮನಗರದಲ್ಲಿ ಸೋಮವಾರ ನಡೆದ ಘಟನೆಯ ಕುರಿತಂತೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಮತ್ತು ಆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಮುಂದೆಯೇ ಸಚಿವ ಅಶ್ವತ್ಥನಾರಾಯಣ ಈ ರೀತಿ ಮಾತನಾಡಿದ್ದು ಸರಿಯೇ’ ಎಂದೂ ಪ್ರಶ್ನಿಸಿದರು. ‘ಭಾಷಣದಲ್ಲಿ ಸಚಿವರು ಬಳಸುತ್ತಿರುವ ಭಾಷೆ, ಶೈಲಿ ಸರಿಯಿಲ್ಲ. ಸಾಕು ನಿಲ್ಲಿಸಿ ಎಂದು ಸ್ವತಃ ಮುಖ್ಯಮಂತ್ರಿ ಸೂಚಿಸಿದರೂ ಅವರು ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಮಾಜಿ ಉಪ ಮುಖ್ಯಮಂತ್ರಿ, ಹಾಲಿ ಉನ್ನತ ಶಿಕ್ಷಣ ಸಚಿವರಾಗಿ ಅವರು, ತಮ್ಮ ಮಾತು, ವರ್ತನೆಯಿಂದ ಯುವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ’ ಎಂದರು.

‘ಇದು ನನಗೆ ಮಾತ್ರ ಹಾಕಿದ ಸವಾಲು ಅಲ್ಲ. ಇಡೀ ರಾಮನಗರ ಜಿಲ್ಲೆಯ ಜನರಿಗೆ ಹಾಕಿದ ಸವಾಲು. ಸಂವಿಧಾನ ಶಿಲ್ಪಿ ಅಂಬೇಡ್ಕರ್, ನಾಡಪ್ರಭು ಕೆಂಪೇಗೌಡರಿಗೆ ಮಾಡಿದ ಅಪಮಾನ. ಸಚಿವರು ರಾಮನಗರದ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡಿದ್ದಾರೆ. ಆವೇಶ, ತೋಳ್ಬಲ, ಗಂಡಸ್ತನದ ಮಾತು ಸಚಿವರ ಬಾಯಲ್ಲಿ ಯಾಕೆ ಬರುತ್ತದೆ ಎಂದು ಮಾಧ್ಯಮಗಳು, ಬಿಜೆಪಿಯ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಹೇಳಬೇಕು’ ಎಂದರು.

‘ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡಿರುವಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕಟೀಲ್‌, ಗಂಡಸುತನ ಇದೆಯಾ ಎಂದು ಕರೆಯುವುದು ಬಿಜೆಪಿ ಸಂಸ್ಕೃತಿಯಾ, ಸಂಸ್ಕಾರವೇ ಎಂದು ಸ್ಪಷ್ಟಪಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.