ADVERTISEMENT

ಮುಖಂಡರ ಮುಂದೆ ಗ್ಲಾಮರಸ್‌ ಆಗಿರಲು ಬಯಸಬೇಡಿ: ಕಾಂಗ್ರೆಸ್ ನಾಯಕಿ ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 14:30 IST
Last Updated 1 ಫೆಬ್ರುವರಿ 2026, 14:30 IST
ಕಾರ್ಯಕ್ರಮದಲ್ಲಿ ಮೋಟಮ್ಮ ಮಾತನಾಡಿದರು
ಕಾರ್ಯಕ್ರಮದಲ್ಲಿ ಮೋಟಮ್ಮ ಮಾತನಾಡಿದರು   

ಮಂಗಳೂರು: ‘ಎಲ್ಲ ರಾಜಕೀಯ ಪಕ್ಷಗಳೂ ಮಹಿಳೆಯರನ್ನು ಕಡೆಗಣಿಸುತ್ತಿದ್ದು ಕೇವಲ ಸಾಂಬಾರ್‌ಗೆ ಪರಿಮಳ ತುಂಬುವ ಕರಿಬೇವಿನಂತೆ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪಕ್ಷಭೇದ ಬಿಟ್ಟು ಹೋರಾಡಬೇಕು. ಗ್ಲಾಮರಸ್‌ ಆಗಿ ಕಾಣಿಸಿಕೊಂಡು ನಾಯಕರ ಹಿಂದೆ ಓಡಾಡುವುದನ್ನು ನಿಲ್ಲಿಸಬೇಕು’ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿದರು.

ನಗರದಲ್ಲಿ ಭಾನುವಾರ ಆರಂಭಗೊಂಡ ಮಹಿಳಾ ಮಂಡಲಗಳ ಒಕ್ಕೂಟದ ಸಮಾವೇಶದಲ್ಲಿ ‘ರಾಜಕೀಯದಲ್ಲಿ ಮಹಿಳೆ’ ವಿಷಯದ ಬಗ್ಗೆ ಮಾತನಾಡಿದ ಅವರು ಮಹಿಳಾ ರಾಜಕಾರಣಿಗಳು ನಾಯಕರ ಮುಂದೆ ಹಲ್ಲು ಕಿರಿದು ನಿಲ್ಲುವುದನ್ನು ಬಿಡಬೇಕು, ಸ್ವಂತ ಕಾಲ ಮೇಲೆ ನಿಂತು ಕೆಲಸ ಮಾಡಿ ನಾಯಕರು ತಮ್ಮ ಬಳಿ ಸಹಾಯ ಕೇಳುವಂತೆ ಮಾಡಬೇಕು ಎಂದರು.

‘ಮತದಾರರಲ್ಲಿ ಶೇಕಡ 50ರಷ್ಟು ಮಹಿಳೆಯರು. ಆದರೆ ಯಾವ ಸರ್ಕಾರವೂ, ಯಾವ ಮುಖಂಡರೂ ಮಹಿಳೆಗೆ ಅಧಿಕಾರ ನೀಡಲು ಬಯಸಲಿಲ್ಲ. ಎಲ್ಲೂ ನಿರ್ಣಯ ಕೈಗೊಳ್ಳುವ ಅವಕಾಶ ಮಹಿಳೆಗೆ ಸಿಗುತ್ತಿಲ್ಲ’ ಎಂದು ಅವರು ಹೇಳಿದರು. 

ADVERTISEMENT

‘ಸಮಾಜದಲ್ಲಿ ಅತ್ಯಾಚಾರದಂಥ ಮನಃಸ್ಥಿತಿ ನಿರ್ಮಾಣವಾಗಲು ಬಹುತೇಕ ಸಂದರ್ಭದಲ್ಲಿ ತಾಯಂದಿರೇ ಕಾರಣ. ಮಕ್ಕಳಿಗೆ ಅವರು ಗಟ್ಟಿತನವನ್ನು ಹೇಳಿಕೊಡುವುದಿಲ್ಲ. ಆದ್ದರಿಂದ ಅತ್ಯಾಚಾರದ ಪಾಪದಲ್ಲಿ ತಾಯಂದಿರಿಗೂ ಪಾಲು ಇದೆ. ಸಿನಿಮಾದವರನ್ನು ನೋಡಿ ಕಲಿಯುವಂತೆ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡುತ್ತಾರೆ. ಸ್ಲೀವ್‌ಲೆಸ್ ಬ್ಲೌಸ್‌, ಟ್ರಾನ್ಸ್‌ಪರೆಂಟ್ ಲಂಗ ಹಾಕಲು ಪ್ರೇರೇಪಿಸುವುದಕ್ಕಿಂತ ಸ್ವಾವಲಂಬಿಯಾಗಲು ತಿಳಿಸಿಕೊಡಬೇಕು’ ಎಂದರು.  

ಎಸ್‌ಡಿಎಂ ಕಾನೂನು ಕಾಲೇಜಿನ ಉಪ ಪ್ರಾಚಾರ್ಯೆ ಬಾಲಿಕಾ ಪ್ರಶಾಂತ್‌ ಅವರು ‘ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ’ ವಿಷಯದ ಬಗ್ಗೆ ಮಾತನಾಡಿದರು. 

ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ರಾವ್,  ಮಹಿಳಾ ಒಕ್ಕೂಟಗಳ ಅಧ್ಯಕ್ಷೆ ಚಂಚಲಾ ತೇಜೋಮಯ, ಕಾಂಗ್ರೆಸ್ ಮುಖಂಡ ರಮಾನಾಥ ರೈ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.