ಚಿಕ್ಕಮಗಳೂರು: ‘ಕಾಂಗ್ರೆಸ್ನವರು ಟ್ವೀಟ್ ಹೋರಾಟ ಬಿಟ್ಟು, ನೆರೆ ಬಾಧಿತ ಹತ್ತಿಪ್ಪತ್ತು ಗ್ರಾಮಗಳನ್ನು ದತ್ತು ತೆಗೆದುಕೊಂಡು ಪುನರ್ವಸತಿಗೆ ಮುಂದಾಗಬೇಕು’ ಎಂದು ಪ್ರವಾಸೋದ್ಯಮ, ಕನ್ನಡ–ಸಂಸ್ಕೃತಿ ಸಚಿವ ಸಿ.ಟಿ. ರವಿ ಕುಟುಕಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಿಮ್ಮ ಆಸ್ತಿಗಳು ಬಹಳ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿವೆ. ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿರುವವರ ನೆರವಿಗೆ ನಿಂತರೆ ಅವು ಸದುಪಯೋಗವಾಗುತ್ತವೆ’ ಎಂದು ವ್ಯಂಗ್ಯವಾಡಿದರು.
‘ನೀವು 10 ಗ್ರಾಮ ದತ್ತು ಪಡೆದರೆ, ಬಿಜೆಪಿಯವರು 20 ಗ್ರಾಮ ತೆಗೆದುಕೊಳ್ಳುತ್ತಾರೆ. ಆಗ ಜೆಡಿಎಸ್ನವರೂ ಎಂಟ್ಹತ್ತು ಗ್ರಾಮ ದತ್ತು ಪಡೆಯುತ್ತಾರೆ. ಇದು ಆರೋಗ್ಯಕರ ಸ್ಪರ್ಧೆಗೆ ಅನುವು ಮಾಡುತ್ತದೆ’ ಎಂದರು.
ರವಿ ಎಷ್ಟು ಗ್ರಾಮ ದತ್ತು ಪಡೆದಿದ್ದಾರೆ : ಸಿದ್ದರಾಮಯ್ಯ ಪ್ರಶ್ನೆ
‘ಸಚಿವ ಸಿ.ಟಿ.ರವಿ ಎಷ್ಟು ಗ್ರಾಮಗಳನ್ನು ದತ್ತು ಪಡೆದಿದ್ದಾರೆ. ಅವರು ದತ್ತು ತೆಗೆದುಕೊಳ್ಳದೆ ಇನ್ನೊಬ್ಬರಿಗೆ ಯಾಕೆ ಹೇಳಬೇಕು’ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಪ್ರಶ್ನಿಸಿದರು.
‘ಮೊದಲು ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಷ್ಟು ಗ್ರಾಮಗಳನ್ನು ದತ್ತು ಪಡೆದಿದ್ದಾರೆ ಲೆಕ್ಕ ಕೊಡಲಿ’ ಎಂದು ತಿರುಗೇಟು ನೀಡಿದರು.
‘ಸಿದ್ದರಾಮಯ್ಯಗೆ ಒಳ್ಳೆಯ ಭವಿಷ್ಯ ಇದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದಾಗ ಅಲ್ಲೇ ಇದ್ದೆ. ಅದಕ್ಕೆ ಏನು ಪ್ರತಿಕ್ರಿಯಿಸಲಾಗದು. ಜನ ಆಶೀರ್ವಾದ ಮಾಡಬೇಕಲ್ವಾ?’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.