
ಮೈಸೂರು: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತಾರೆ. ನಾಯಕತ್ವ ಬದಲಾವಣೆ ಮಾಡುವುದಿಲ್ಲವೆಂದು ಹೈಕಮಾಂಡ್ ಕೂಡ ಹೇಳಿದೆ. ಬೇರೆಯವರ ಬೇಡಿಕೆಗೆ ಮನ್ನಣೆಯನ್ನು ಕೊಟ್ಟಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯಕ್ಕಂತೂ ಮುಖ್ಯಮಂತ್ರಿ ಬದಲಾವಣೆ ಗೊಂದಲ ಯಾವುದೂ ಇಲ್ಲ. ಹೈಕಮಾಂಡ್ ನೇರವಾಗಿ ಹೇಳದಿದ್ದರೂ, ಸ್ಪಷ್ಟ ಸಂದೇಶವನ್ನು ಈಗಾಗಲೇ ನೀಡಿದೆ’ ಎಂದರು.
‘ಗ್ರಾಮ ಸ್ವರಾಜ್ಯದ ಪರಿಕಲ್ಪನೆ ನೀಡಿದವರು ಮಹಾತ್ಮ ಗಾಂಧಿ. ಗ್ರಾಮಗಳನ್ನು ಸ್ವಾವಲಂಬಿಯಾಗಿಸುವ, ಎಲ್ಲರಿಗೂ ಉದ್ಯೋಗ ನೀಡುವ ಮನರೇಗಾ ಯೋಜನೆ ಹೆಸರನ್ನು ಬಿಜೆಪಿ ಬದಲು ಮಾಡಿದೆ. ಗಾಂಧಿ ಹೆಸರು ಬದಲು ಮಾಡಿರುವುದಲ್ಲದೇ ಸಾವಿರಾರು ಜನ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗುವಂತೆ ಯೋಜನೆಯ ಸ್ವರೂಪವನ್ನೇ ಬದಲಿಸಿದ್ದಾರೆ. ಸುಳ್ಳು ಟೀಕೆಗಳನ್ನು ಮಾಡುವ ಬಿಜೆಪಿಗರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದರು.
‘ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಮೇಲೆ ಗುರುತರ ಆರೋಪ ಮಾಡಲು ಬಿಜೆಪಿಗರಿಗೆ ಏನೂ ಇಲ್ಲ. ಹೀಗಾಗಿಯೇ ಕೆ.ಜೆ.ಜಾರ್ಜ್ ನನ್ನ ಬಗ್ಗೆ ಅಸಮಾಧಾನಗೊಂಡಿದ್ದಾರೆಂದು ಹೇಳಿದರು. ವಿಧಾನಮಂಡಲ ಅಧಿವೇಶನದಲ್ಲೂ ವಿನಾ ಕಾರಣ ನನ್ನ ಹೆಸರು ಪ್ರಸ್ತಾಪಿಸಿದರು’ ಎಂದು ಹೇಳಿದರು.
‘ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಾರದರ್ಶಕತೆ ತರಲು ಮತಪತ್ರಗಳ ಬಳಕೆ ಮಾಡಲು ನಿರ್ಧರಿಸಲಾಗಿದೆ. ಇವಿಎಂ ಪಾರದರ್ಶಕತೆ ಬಗ್ಗೆ ಅನುಮಾನಗಳಿವೆ. ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳೇ ಮತಪತ್ರಗಳನ್ನು ಬಳಸುತ್ತಿವೆ. ಮತಗಟ್ಟೆಗಳನ್ನು ದೋಚಲು ಸಾಧ್ಯವಾಗದು. ಅಕ್ರಮ ನಡೆದರೆ ಕಂಡು ಹಿಡಿಯುವುದು ಸುಲಭ. ಆದರೆ, ಇವಿಎಂ ತಂತ್ರಜ್ಞಾನದಲ್ಲಿ ಫಲಿತಾಂಶ ಬದಲಿಸಿದರೂ ಗೊತ್ತಾಗದು. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮತಪತ್ರಗಳ ಬಳಕೆ ಮಾಡುವುದು ಒಳಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.