ADVERTISEMENT

ಪ್ರಧಾನಿ ಮೋದಿ ರಾಜ್ಯಕ್ಕೆ ಬಂದದ್ದು ತುರ್ತು ಸಂದರ್ಭದಲ್ಲೇ: ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2022, 9:58 IST
Last Updated 24 ಜೂನ್ 2022, 9:58 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ನಗರದಲ್ಲಿ ಫ್ಲೆಕ್ಸ್‌ ಬೋರ್ಡ್‌ಗಳನ್ನು ಹಾಕಲು ಅನುಮತಿ ನೀಡಿಲ್ಲ. ಆದರೂ, ತುರ್ತು ಸಂದರ್ಭಗಳಲ್ಲಿ ಅವಕಾಶ ನೀಡಬೇಕಾಗುತ್ತದೆ ಎಂದು ಬಿಬಿಎಂಪಿ ಹೇಳಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿ ಅವರು ತುರ್ತು ಸಂದರ್ಭದಲ್ಲಿ ಭೇಟಿ ನಿಡಿದ್ದಾರೆಯೇ ಎಂದು ಪ್ರಶ್ನಿಸಿದೆ.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಎರಡು ದಿನಗಳ ಭೇಟಿ ಸಲುವಾಗಿ ರಾಜ್ಯಕ್ಕೆ ಆಗಮಿಸಿದ್ದರು. ಜೂನ್‌ 20ರಂದು ಬೆಂಗಳೂರಿಗೆ ಆಗಮಿಸಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದ ಮೋದಿ ಅವರಿಗೆ,ಭರ್ಜರಿ ಸ್ವಾಗತ ಕೋರಲಾಗಿತ್ತು. ಈ ವೇಳೆ ನಗರದಾದ್ಯಂತ ಫ್ಲೆಕ್ಸ್‌ ಬೋರ್ಡ್‌ಗಳು, ಬಿಜೆಪಿ ಬಾವುಟಗಳು ರಾರಾಜಿಸಿದ್ದವು. ಜೂನ್‌ 21ರಂದು ಮೈಸೂರಿನಲ್ಲಿ 'ಅಂತರರಾಷ್ಟ್ರೀಯ ಯೋಗ ದಿನ' ಆಚರಣೆಯಲ್ಲಿ ಭಾಗಿಯಾಗಿದ್ದ ಮೋದಿ, ಅದೇ ದಿನ ದೆಹಲಿಗೆ ಮರಳಿದ್ದರು.

ಮೋದಿ ಸ್ವಾಗತಕ್ಕೆ ಬೆಂಗಳೂರಿನಲ್ಲಿ ಫ್ಲೆಕ್ಸ್‌ ಬೋರ್ಡ್‌ಗಳನ್ನು ಹಾಕಲು ಬಿಬಿಎಂಪಿ ಅನುಮತಿ ನೀಡಿರಲಿಲ್ಲ ಎಂಬ ವಿಚಾರವಾಗಿ ಪ್ರಜಾವಾಣಿ ಹಾಗೂ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದ್ದವು.

ADVERTISEMENT

ಪಾಲಿಕೆ ವತಿಯಿಂದ 16 ಸಾವಿರ ಫ್ಲೆಕ್ಸ್‌ ಬೋರ್ಡ್‌ಗಳನ್ನು ತೆರವುಗೊಳಿಸಲಾಗಿದೆ.ಹೈಕೋರ್ಟ್‌ ನಿಷೇಧ ವಿಧಿಸಿದ ಬಳಿಕ,ಫ್ಲೆಕ್ಸ್‌ ಬೋರ್ಡ್‌ಗಳನ್ನು ಹಾಕಲು ಪಾಲಿಕೆ ಯಾರಿಗೂ ಅನುಮತಿ ನೀಡಿಲ್ಲ. ಆದಾಗ್ಯೂ ಮೋದಿ ಸಂಚರಿಸಿದ ಮಾರ್ಗದುದ್ದಕ್ಕೂ ಸಾವಿರಾರು ಬ್ಯಾನರ್‌ಗಳನ್ನು ಹಾಕಲಾಗಿತ್ತು. ತುರ್ತು ಸನ್ನಿವೇಶಗಳಲ್ಲಿ ಅನುಮತಿ ನೀಡಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದವು.

ಈ ಸಂಬಂಧ #WhyBJPWhy ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿಯು 16 ಸಾವಿರ ಫ್ಲೆಕ್ಸ್‌ ಬೋರ್ಡ್‌ಗಳನ್ನು ಅಕ್ರಮವಾಗಿ ಹಾಕಿದೆ. ಆದರೂ ಬಿಬಿಎಂಪಿ ಒಂದೇಒಂದು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗುತ್ತಿಲ್ಲ. ಅದರ ಬದಲು, ತುರ್ತು ಸಂದರ್ಭಗಳಲ್ಲಿ ಫ್ಲೆಕ್ಸ್‌ ಅಳವಡಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ. ಪ್ರಧಾನಿಯವರು ಆಗಮಿಸಿದ್ದದ್ದು ತುರ್ತು ಸಂದರ್ಭವೇ?' ಎಂದು ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.