ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಇದೇ 10 ರಂದು ಕರೆ ನೀಡಿರುವ ‘ಭಾರತ ರಕ್ಷಿಸಿ ಆಂದೋಲನ’ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಕಾರಣಕ್ಕೆ ಹೇರಲಾಗಿದ್ದ ಲಾಕ್ ಡೌನ್ನಿಂದಾಗಿ ಕಾರ್ಮಿಕ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಕಷ್ಟಕಾಲದಲ್ಲಿ ದುಡಿಯುವ ವರ್ಗದ ನೆರವಿಗೆ ಬರಬೇಕಿದ್ದ ಕೇಂದ್ರ ಮತ್ತು ಬಿಜೆಪಿ ಆಳ್ವಿಕೆಯಿರುವ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ಮೂಲಕ ಈ ವರ್ಗದ ಬದುಕನ್ನು ಮತ್ತಷ್ಟು ಬರ್ಬರವಾಗಿಸಿವೆ ಎಂದು ಅವರು ದೂರಿದ್ದಾರೆ.
ಕರ್ನಾಟಕ ಸರ್ಕಾರ ಕೈಗಾರಿಕೆ ಕಾಯ್ದೆಗೆ ತಂದಿರುವ ತಿದ್ದುಪಡಿಯು ತಮ್ಮ ಕೆಲಸಗಾರರನ್ನು ಮನಸೋ ಇಚ್ಛೆ ಬಳಸಿಕೊಂಡು ಬಿಸಾಡುವಂತಹ ಸ್ವಾತಂತ್ರ್ಯವನ್ನು ಶೇ 80 ಕ್ಕೂ ಹೆಚ್ಚು ಉದ್ದಿಮೆಗಳ ಮಾಲೀಕರಿಗೆ ಕೊಟ್ಟಿದೆ. ಇದರಿಂದ ರಾಜ್ಯದ ಶೇ 50ಕ್ಕೂ ಹೆಚ್ಚು ಪ್ರಮಾಣದ ಸಂಘಟಿತ ವಲಯದ ಕಾರ್ಮಿಕರು ಕೆಲಸದ ಅವಧಿ, ಓವರ್ ಟೈಮ್ ಭತ್ಯೆ, ಸುರಕ್ಷತೆ ಹಾಗೂ ಗಳಿಕೆ ರಜೆ ಮತ್ತಿತರ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಜತೆಗೆ ₹417 ವ್ಯತ್ಯಸ್ಥ ತುಟ್ಟಿಭತ್ಯೆಯನ್ನು ಒಂದು ವರ್ಷ ಮುಂದೂಡುವ ಮೂಲಕ ತಿಂಗಳಿಗೆ ₹11ಸಾವಿರ ಪಡೆಯುವ ಜನರ ಹೊಟ್ಟೆಗೆ ಹೊಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆ, ಭೂಸುಧಾರಣೆ, ಎಪಿಎಂಸಿ ಹಾಗೂ ಅಗತ್ಯ ವಸ್ತುಗಳ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.