ADVERTISEMENT

ಉಪ ಚುನಾವಣೆ: ಕಾಂಗ್ರೆಸ್‌ಗೆ ಪೂರಕ ವಾತಾವರಣವಿದೆ – ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 5:48 IST
Last Updated 25 ಅಕ್ಟೋಬರ್ 2018, 5:48 IST
   

ಬೆಂಗಳೂರು: ‘ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಮೂರ್ನಾಲ್ಕು ದಿನದಿಂದ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್‌ ಮತ್ತೊಮ್ಮೆ ಗೆಲ್ಲುವ ಪೂರಕ ವಾತಾವರಣ ಅಲ್ಲಿದೆ' ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.

ಸಿದ್ದು ನ್ಯಾಮಗೌಡರು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅವರ ಮಗ ಯುವಕನಾಗಿದ್ದರೂ ತಂದೆಯ ಮಾರ್ಗದಲ್ಲಿಯೇ ಸಾಗಿದ್ದಾರೆ. ಹೀಗಾಗಿ ಅವರು ಗೆಲ್ಲುವ ವಿಶ್ವಾಸವಿದೆ ಎಂದರು.

ಬಳ್ಳಾರಿಯಲ್ಲಿ ಕೆಲವರು ಜಾತಿ ಹೆಸರಿನಲ್ಲಿ ಮತ ಯಾಚನೆ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಯಾರೂ ಕೂಡ ಜಾತಿ ಮುಂದಿಟ್ಟುಕೊಂಡು ಹೋಗಬಾರದು ಎಂದರು.

ADVERTISEMENT

‘ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹೋಗದೇ ಇರುವುದಕ್ಕೆ‌ ಆ ಸಮುದಾಯದವರ ಕ್ಷಮೆ ಯಾಚಿಸುವೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೋಗುವ ನಿರೀಕ್ಷೆ ಇತ್ತು. ನಾನು ಈ ಸಂದರ್ಭದಲ್ಲಿ ಜಮಖಂಡಿಯಲ್ಲಿ ಪ್ರಚಾರದಲ್ಲಿದ್ದೆ.‌ ಮುಖ್ಯಮಂತ್ರಿ ಅವರಿಗೆ ಅನಿರೀಕ್ಷಿತವಾಗಿ ಅನಾರೋಗ್ಯ ಎದುರಾದ ಕಾರಣ ಅವರು ಹೋಗಲು ಸಾಧ್ಯವಾಗಿಲ್ಲ. ಉದ್ದೇಶಪೂರ್ವಕವಾಗಿ ಅಲ್ಲ.‌ ಹೀಗಾಗಿ, ವಾಲ್ಮೀಕಿ ಸಮುದಾಯದ ಭಾವನೆಗೆ ಧಕ್ಕೆ ಆಗಿದ್ದರೆ ಕ್ಷಮೆ ಯಾಚಿಸುವೆ’ ಎಂದರು.

ವಿದ್ಯಾರ್ಥಿ ವೇತನ ವಿತರಣೆ
ಬಡತನದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಸ್ಕಾನ್ ವತಿಯಿಂದ ನೀಡುವ ವಿದ್ಯಾರ್ಥಿ ವೇತನವನ್ನು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಬಿಡಿಎ ಕ್ವಾಟ್ರಸ್‌ನಲ್ಲಿ ಗುರುವಾರ ವಿತರಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಾನ್‌ಸ್ಟೇಬಲ್, ಹೂ ಮಾರಿಕೊಂಡು ಜೀವನ‌ ನಡೆಸುವ ಬಡ ಕುಟುಂಬದ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಅವರಿಗೆ ಇಸ್ಕಾನ್ ವತಿಯಿಂದ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ‌ ಶ್ಲಾಘನೀಯ ಎಂದರು.

ಸಾಂಕೇತಿಕವಾಗಿ 10 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.