ಬೆಂಗಳೂರು: ‘ನನ್ನ ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಕಾರಿಗೆ ಸರ್ವೀಸ್ ಸೆಂಟರ್ನವರು ಪೆಟ್ರೋಲ್ ಭರ್ತಿ ಮಾಡುವ ಬದಲಿಗೆ ಡೀಸೆಲ್ ತುಂಬಿಸಿ ಎಂಜಿನ್ ಹಾಳು ಮಾಡಿ ನಷ್ಟ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ನಗರದ ಯುವ ಉದ್ಯಮಿ ವಿಕಾಸ್ ಅಗರವಾಲ್ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೆಟ್ಟಿಲೇರಿದ್ದಾರೆ.
‘ಕಳೆದ ತಿಂಗಳ 4ರಂದು ನನ್ನ ಕಾರನ್ನು ನಗರದ ಕಸ್ತೂರಬಾ ರಸ್ತೆಯಲ್ಲಿರುವ ಟಿವಿಎಸ್ ಸುಂದರಮ್ ಐಯ್ಯಂಗಾರ್ ಅಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿಭಾಗೀಯ ಕೇಂದ್ರದಲ್ಲಿ ಸರ್ವೀಸ್ಗೆ ಬಿಟ್ಟಿದ್ದೆ. ಈ ವೇಳೆ ಸರ್ವೀಸ್ ಸೆಂಟರ್ನವರು ಪ್ರಮಾದ ಎಸಗಿದ್ದಾರೆ. ಸರ್ವೀಸ್ ಆಗಿ ಕಾರನ್ನು ಹೊರತೆಗೆದುಕೊಂಡು ಆವರಣದಿಂದ ಹೋಗುವ ಮುನ್ನವೇ ಕಾರು ಕೆಟ್ಟಿರುವುದು ನನ್ನ ಗಮನಕ್ಕೆ ಬಂದಿದೆ’ ಎಂಬುದು ಫಿರ್ಯಾದುದಾರರ ದೂರು.
‘ಕಾರು ಕೆಟ್ಟಿರುವುದಕ್ಕೆ ವಿವರಣೆ ಕೇಳಿದರೆ, ಇದೊಂದು ಸಣ್ಣ ಪ್ರಮಾದ ಎಂದು ಸರ್ವೀಸ್ ಕೇಂದ್ರದವರು ಉತ್ತರಿಸಿದ್ದಾರೆ. ಇದು ಸಾಮಾನ್ಯವಾಗಿ ಆಗುವಂಥಾದ್ದು ಎಂಬ ಉತ್ತರ ನೀಡಿದ್ದಾರೆ. ಈ ಧೋರಣೆ ಅವರ ವೃತ್ತಿಪರತೆಯನ್ನೇ ಪ್ರಶ್ನಿಸುವಂತಿದೆ. ಅಷ್ಟಕ್ಕೂ ಅವರು ನನ್ನ ಪರವಾನಗಿ ಇಲ್ಲದೆ ಇಂಧನ ಟ್ಯಾಂಕ್ ಅನ್ನು
ಸ್ವಚ್ಛಗೊಳಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.