ADVERTISEMENT

ಹಂಪಿ ಕನ್ನಡ ವಿ.ವಿ: ಕೃತಿಚೌರ್ಯದ ಆರೋಪ

‘ಕುವೆಂಪು ಪತ್ರಗಳು’ ಪುಸ್ತಕದ 62 ಪತ್ರ ಯಥಾವತ್ತಾಗಿ 12ನೇ ಸಂಪುಟದಲ್ಲಿ ಪ್ರಕಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಡಿಸೆಂಬರ್ 2020, 19:31 IST
Last Updated 13 ಡಿಸೆಂಬರ್ 2020, 19:31 IST
ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟ
ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟ   

ಹೊಸಪೇಟೆ: ಹನ್ನೆರಡು ಸಂಪುಟಗಳ ಕುವೆಂಪು ಸಮಗ್ರ ಸಾಹಿತ್ಯ ಸರಣಿ ಹೊರತಂದಿರುವ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿ ಬಂದಿದೆ.

ಕೆ.ಸಿ. ಶಿವಾರೆಡ್ಡಿ ಸಂಪಾದಕತ್ವದ ಕುವೆಂಪು ಸಮಗ್ರ ಸಾಹಿತ್ಯವನ್ನು ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಬಿಡುಗಡೆಗೊಳಿಸಿದ್ದರು. 12ನೇ ಸಂಪುಟದಲ್ಲಿ ಪ್ರಕಟಿಸಿರುವ ಕುವೆಂಪು ಅವರ 62 ಪತ್ರಗಳೇ ಈಗ ವಿವಾದ ಸೃಷ್ಟಿಸಿದ್ದು, ಕೃತಿಚೌರ್ಯದ ಆರೋಪಕ್ಕೆ ಗುರಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ವ್ಯಾಪಕ ಚರ್ಚೆ ಶುರುವಾಗಿದೆ. ಕನ್ನಡ ವಿಶ್ವವಿದ್ಯಾಲಯದ ಕ್ರಮಕ್ಕೆ ಟೀಕೆ ವ್ಯಕ್ತವಾಗಿದೆ.

‘ನನ್ನ ಅನುಮತಿ ಪಡೆಯದೇ, ಕನಿಷ್ಠ ಗಮನಕ್ಕೂ ತರದೇ ನಾನು ಬರೆದ ‘ಕುವೆಂಪು ಪತ್ರಗಳು’ ಪುಸ್ತಕದಿಂದ 62 ಪತ್ರಗಳನ್ನು ಯಥಾವತ್ತಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ 12ನೇ ಸಂಪುಟದಲ್ಲಿ ಪ್ರಕಟಿಸಿದೆ. ಕದ್ದು ಪ್ರಕಟಿಸಿರುವ ವಿಶ್ವವಿದ್ಯಾಯದ ಕ್ರಮ ಅದರ ಘನತೆಗೆ ತಕ್ಕುದಲ್ಲ’ ಎಂದು ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾನು ಸುಮಾರು ವರ್ಷಗಳ ಕಾಲ ಅನೇಕ ಕಡೆಗಳಲ್ಲಿ ಓಡಾಡಿ, ಹುಡುಕಿ ಕುವೆಂಪು ಅವರ ಪತ್ರಗಳನ್ನು ಶ್ರಮಪಟ್ಟು ಸಂಗ್ರಹಿಸಿದ್ದೆ. ಬಳಿಕ ಕುವೆಂಪು ಅವರ ಅನುಮತಿ ಮೇರೆಗೆ 1974ರಲ್ಲಿ ಬರೆದ ಪುಸ್ತಕದಲ್ಲಿ ಪ್ರಕಟಿಸಿದ್ದೆ. ಹೀಗಿರುವಾಗ ನನ್ನ ಪುಸ್ತಕದಲ್ಲಿನ ಕುವೆಂಪು ಅವರ ಪತ್ರಗಳನ್ನು ಪ್ರಕಟಿಸಿರುವುದಾದರೂ ಹೇಗೆ? ಇದು ಕುವೆಂಪು ಅವರಿಗೆ ಮಾಡಿರುವ ಅಪಮಾನವೂ ಹೌದು. ಸಂಪುಟದಲ್ಲಿ ಅನೇಕ ಕಡೆ ನನ್ನ ಹೆಸರು ಹರಿಹರಿಪ್ರಿಯ, ಹರಿಪ್ರಿಯ ಎಂದು ತಪ್ಪಾಗಿ ಮುದ್ರಿಸಿ ನನಗೂ ಅವಮಾನ ಮಾಡಿದ್ದಾರೆ’ ಎಂದು ದೂರಿದ್ದಾರೆ.

‘ವಿಶ್ವವಿದ್ಯಾಲಯದಿಂದ ಆಗಿರುವ ತಪ್ಪಿನ ಕುರಿತು ಕುಲಪತಿ ಪ್ರೊ.ಸ.ಚಿ. ರಮೇಶ, ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ಹಾಗೂ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್‌.ಡಿ ಪ್ರಶಾಂತ್‌ ಅವರಿಗೆ ಸಂಪರ್ಕಿಸಿ ವಿಷಯ ಗಮನಕ್ಕೆ ತಂದರೂ ಅವರು ಸರಿಯಾಗಿ ಸ್ಪಂದಿಸಿಲ್ಲ. ಈ ಧೋರಣೆಯನ್ನು ನಾನು ಖಂಡಿಸುತ್ತೇನೆ’ ಎಂದಿದ್ದಾರೆ.

ಬೆಲೆಯಲ್ಲಿ ಭಾರಿ ವ್ಯತ್ಯಾಸ: ಟೀಕೆ
‘ಕುವೆಂಪು ಪ್ರತಿಷ್ಠಾನದವರು ಅನೇಕ ವರ್ಷಗಳ ಹಿಂದೆಯೇ ಕುವೆಂಪು ಸಮಗ್ರ ಸಾಹಿತ್ಯ ಹೊರತಂದಿದ್ದಾರೆ. ಹೀಗಿರುವಾಗ ಕನ್ನಡ ವಿಶ್ವವಿದ್ಯಾಲಯ ಪುನಃ ಅದನ್ನೇ ಪ್ರಕಟಿಸುವ ಅವಶ್ಯಕತೆಯಾದರೂ ಏನಿತ್ತು? 2017ರಲ್ಲೇ 11 ಸಂಪುಟಗಳನ್ನು ಪ್ರಕಟಿಸಿದ್ದರು. ಈಗ 12ನೇ ಸಂಪುಟ ಪ್ರಕಟಿಸಿ ಎಲ್ಲವೂ ಒಟ್ಟಿಗೆ ಮಾರಾಟ ಮಾಡುತ್ತಿದ್ದಾರೆ. ಹನ್ನೆರಡು ಸಂಪುಟಗಳ ಮುಖಬೆಲೆ ₹10 ಸಾವಿರ ನಿಗದಿಪಡಿಸಿದ್ದಾರೆ. ಆದರೆ, ಪ್ರತಿಷ್ಠಾನದವರು ₹4,500ಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಂದೇ ವಿಷಯ ಇರುವ ಪುಸ್ತಕಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ ಇರುವುದನ್ನು ನೋಡಿದರೆ ಕನ್ನಡ ವಿಶ್ವವಿದ್ಯಾಲಯದವರು ಕುವೆಂಪು ಅವರ ಹೆಸರಿನಲ್ಲಿ ವ್ಯಾಪಾರ ಮಾಡಲು ಹೊರಟಿರುವಂತಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಾಹಿತಿಯೊಬ್ಬರು ಟೀಕಿಸಿದ್ದಾರೆ.

*
ಕೃತಿ ಚೌರ್ಯ ಮಾಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿರುದ್ಧ ಕಾನೂನು ಸಮರ ಸಾರಲು ನಿರ್ಧರಿಸಿದ್ದೇನೆ. ಭವಿಷ್ಯದಲ್ಲಿ ಈ ತರಹ ಯಾರು ಮಾಡಬಾರದು.
–ಪುಸ್ತಕಮನೆ ಹರಿಹರಪ್ರಿಯ, ಸಾಹಿತಿ

*
ಈ ವಿಷಯ ಗಮನಕ್ಕೆ ಬಂದಿದೆ. ಸತ್ಯಾಸತ್ಯತೆ ತಿಳಿಯಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಕೊಟ್ಟ ನಂತರ ಮುಂದಿನ ಕ್ರಮ ಜರುಗಿಸಲಾಗುವುದು.
–ಪ್ರೊ. ಎ.ಸುಬ್ಬಣ್ಣ ರೈ, ಕುಲಸಚಿವ, ಹಂಪಿ ಕನ್ನಡ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.