ADVERTISEMENT

ಜೂನ್‌ 7ರ ಬಳಿಕವೂ ಲಾಕ್‌ಡೌನ್‌ ವಿಸ್ತರಣೆಗೆ ತಜ್ಞರ ಶಿಫಾರಸು

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 0:46 IST
Last Updated 1 ಜೂನ್ 2021, 0:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಕೋವಿಡ್‌ ದೃಢಪಡುವ ಪ್ರಮಾಣ ಶೇ 5ಕ್ಕಿಂತ ಕೆಳಗೆ ಬರುವರೆಗೆ ಮತ್ತು ಮರಣ ಪ್ರಮಾಣ ಶೇ 1ಕ್ಕಿಂತ ಕೆಳಗೆ ಇಳಿಯುವವರೆಗೆ ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕು’ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

‘ಕೋವಿಡ್‌ ದೃಢ ಪ್ರಮಾಣ ಸೋಮವಾರ (ಮೇ 31) ಶೇ 13.57ರಷ್ಟು ಹಾಗೂ ಮರಣ ಪ್ರಮಾಣ ಶೇ 2.47 ಇದೆ. ದಿನೇ ದಿನೇ ಕೋವಿಡ್‌ ದೃಢ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ದಿನನಿತ್ಯದ ಸೋಂಕು ದೃಢ ಪ್ರಮಾಣ 5 ಸಾವಿರಕ್ಕೆ ಇಳಿಯುವರೆಗೆ ಕಠಿಣ ನಿಯಮಗಳನ್ನು ಮುಂದುವರಿಸಬೇಕು‘ ಎಂದು ಸಮಿತಿ ಹೇಳಿದೆ.

ಸೋಮವಾರ ಬೆಳಿಗ್ಗೆ ವರದಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ಸಲ್ಲಿಸಿದೆ.

ADVERTISEMENT

ಭಾನುವಾರ (ಮೇ 30) ಸುಮಾರು 5.30 ಗಂಟೆಸಭೆ ನಡೆಸಿದ ಸಮಿತಿಯ ಎಲ್ಲ 14 ಸದಸ್ಯರು, ಕೇಂದ್ರ ಸರ್ಕಾರದ ಮಾರ್ಗಸೂಚಿ, ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ವರದಿಯಾಗುತ್ತಿರುವ ಕೋವಿಡ್‌ ಪ್ರಕರಣಗಳು, ದೃಢಪಡುವ ಪ್ರಮಾಣ, ಸಾವು ಪ್ರಮಾಣದ ಬಗ್ಗೆ ವಿಸ್ಕೃತ ಚರ್ಚೆ ನಡೆಸಿದ ಬಳಿಕ ಈ ಶಿಫಾರಸು ಮಾಡಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ.

‘ಯಾವ ರೀತಿಯಲ್ಲಿ ಲಾಕ್‌ಡೌನ್‌ ಮಾಡಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟಿದ್ದು. ಸದ್ಯದ ಪರಿಸ್ಥಿತಿ ನೋಡಿದರೆ, ಲಾಕ್‌ಡೌನ್‌ ವಿಧಿಸಿರುವ ಜೂನ್‌ 7ರವರೆಗೆ ದೃಢ ಪ್ರಮಾಣ ಶೇ 5ಕ್ಕಿಂತ ಕೆಳಗೆ ಮತ್ತು ಮರಣ ಪ್ರಮಾಣ ಶೇ 1ಕ್ಕಿಂತ ಕಡಿಮೆ ಬರುವುದು ಅನುಮಾನ. ಹೀಗಾಗಿ, ಸದ್ಯಕ್ಕೆ ಈಗ ಜಾರಿಯಲ್ಲಿರುವ ಕ್ರಮಗಳನ್ನು ಮುಂದುವರಿಸಬೇಕು’ ಎಂಬ ಅಭಿಪ್ರಾಯ ಸಮಿತಿಯ ಸಭೆಯಲ್ಲಿ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.