ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ವ್ಯಕ್ತಿ ಗುಣಮುಖನಾಗಿ ಮನೆಗೆ ತೆರಳುವ ಮುನ್ನ ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಅವರನ್ನು ಬೀಳ್ಕೊಟ್ಟರು. ಕೋವಿಡ್–19ನಿಂದ ಚೇತರಿಸಿಕೊಂಡ ವ್ಯಕ್ತಿಯು, ಚಿಕಿತ್ಸೆ ನೀಡಿದ ವೈದ್ಯರ ಕಾಲಿಗೆ ಬಿದ್ದು ಧನ್ಯವಾದ ಅರ್ಪಿಸಿದರು.
ಆರೋಗ್ಯ ಸಚಿವ ಶ್ರೀರಾಮುಲು ಭಾನುವಾರ ಟ್ವಿಟರ್ನಲ್ಲಿ ಅದರ ವಿಡಿಯೊ ಹಂಚಿಕೊಂಡಿದ್ದಾರೆ.
'ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್–19ನಿಂದ ಗುಣಮುಖರಾಗಿ ಹೊರಟಾಗ, ವೈದ್ಯರು ಮತ್ತು ಸಿಬ್ಬಂದಿ ಈ ವ್ಯಕ್ತಿಯನ್ನು ಪ್ರೀತಿಪೂರ್ವಕವಾಗಿ ಬೀಳ್ಕೊಡುತ್ತಾರೆ. ಈ ಸಂದರ್ಭದಲ್ಲಿ, ವ್ಯಕ್ತಿಯು ಹಗಲಿರುಳು ತನ್ನ ಸೇವೆಗೈದು ಗುಣಪಡಿಸಿದ ವೈದ್ಯರ ಕಾಲಿಗೆರಗುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯೆಂದರೆ ಇದಲ್ಲವೇ? ನಿಜಕ್ಕೂ ಹೆಮ್ಮೆಯೆನಿಸುತ್ತದೆ.' ಎಂದು ಟ್ವೀಟಿಸಿದ್ದಾರೆ.
ಭಾನುವಾರ ಸಂಜೆ ವರೆಗಿನ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಒಟ್ಟು 232 ಸೋಂಕು ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 172 ರೋಗಿಗಳಲ್ಲಿ ನಾಲ್ವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಈವರೆಗೆ 54 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.