ಬೆಂಗಳೂರು: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತ್ಯಗತ್ಯ ಸೇವೆ ಒದಗಿಸುತ್ತಿರುವ 10 ಇಲಾಖೆಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರದ ಉಳಿದ ಇಲಾಖೆಗಳು, ಪ್ರಾಧಿಕಾರ, ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕಚೇರಿಗೆ ಬರುವುದಕ್ಕೆ ಇದ್ದ ವಿನಾಯ್ತಿಯನ್ನು ಏ.14 ರವರೆಗೆ ಮುಂದುವರಿಸಲಾಗಿದೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರು ಈ ಸಂಬಂಧ ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ, ಕಂದಾಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಆಹಾರ, ವಾರ್ತಾ, ಸಾರಿಗೆ, ಪಶು ವೈದ್ಯಕೀಯ ಮತ್ತು ಇಂಧನ ಇಲಾಖೆಗಳನ್ನು ಅತ್ಯಗತ್ಯ ಇಲಾಖೆಗಳೆಂದು ಪರಿಗಣಿಸಲಾಗಿದೆ.
ವಿನಾಯ್ತಿ ಪಡೆದಿರುವ ಇಲಾಖೆ, ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್– ಬಿ, ಗ್ರೂಪ್–ಸಿ ಮತ್ತು ಗ್ರೂಪ್–ಡಿ ಅಧಿಕಾರಿ, ನೌಕರರು ಏಪ್ರಿಲ್ 14 ರವರೆಗೆ ಕಚೇರಿಗೆ ಬರುವುದಕ್ಕೆ ವಿನಾಯ್ತಿ ನೀಡಲಾಗಿದೆ. ಆದರೆ, ವಿವಿಧ ಜಿಲ್ಲೆಗಳಲ್ಲಿ ಕೋವಿಡ್–19 ನಿಯಂತ್ರಣ ಕಾರ್ಯಕ್ಕಾಗಿ ಈ ಇಲಾಖೆಗಳ ಅಧಿಕಾರಿಗಳ ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳು ಇವರ ಸೇವೆ ಪಡೆಯಬಹುದು ಎಂದು ಸುತ್ತೋಲೆಯಲ್ಲಿ ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.