ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯದೆಲ್ಲೆಡೆ ಮಾಲ್ಗಳು, ಚಿತ್ರಮಂದಿರಗಳು, ಶಾಲಾ, ಕಾಲೇಜುಗಳನ್ನು ಬಂದ್ ಮಾಡಲು ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ, ಶನಿವಾರ ಜನರ ಓಡಾಟ ಕಡಿಮೆಯಾಗಿದ್ದು, ಎಲ್ಲೆಡೆ ಭಣಗುಟ್ಟುವ ವಾತಾವರಣ ನಿರ್ಮಾಣವಾಗಿತ್ತು.
ರಾಜ್ಯದಲ್ಲಿ ಹೊಸದಾಗಿ ಸೋಂಕು ತಗುಲಿದ ಪ್ರಕರಣ ಪತ್ತೆಯಾಗದೇ ಇರುವುದು ಜನರಿಗೆ ಮತ್ತು ಸರ್ಕಾರಕ್ಕೆ ನೆಮ್ಮದಿಯನ್ನು ತಂದಿದೆ. ಆದರೆ, ಆತಂಕದ ಭಾವನೆ ಮಾತ್ರ ಕರಗಿಲ್ಲ.
ಮದುವೆ, ಜಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರದಂತೆ ಮನವೊಲಿಸುವ ಕೆಲಸ ಸರ್ಕಾರ ಕಡೆಯಿಂದ ನಡೆದಿದೆ. ಮಾಲ್, ಚಿತ್ರಮಂದಿರ, ಕ್ಲಬ್, ಪಬ್ಗಳು ಬಂದ್ ಆಗಿರುವುದರಿಂದ ವ್ಯಾಪಾರ, ವಹಿವಾಟಿನ ಮೇಲೆ ತೀವ್ರ ಹೊಡೆತ ಬಿದ್ದಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಬೇರೆ ಬೇರೆ ಜಿಲ್ಲೆಯವರು ರಾಜಧಾನಿ ತೊರೆಯಲು ಮುಂದಾಗಿದ್ದರಿಂದಾಗಿ, ಹೊರ ಊರುಗಳಿಗೆ ಹೋಗಲಿರುವ ಬಸ್, ರೈಲುಗಳು ತುಂಬಿ ತುಳುಕಿದ ಸ್ಥಿತಿ ಶನಿವಾರ ಸೃಷ್ಟಿಯಾಗಿತ್ತು. ಹೊರರಾಜ್ಯಗಳಿಗೆ ಹೋಗುವ 92 ಐಷಾರಾಮಿ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
‘ಕೊರೊನಾ ಶಂಕೆಯ ಮೇಲೆ 32 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚೀನಾ, ಇಟಲಿ, ಇರಾನ್, ಕೊರಿಯಾ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಗಳಿಂದ ಬಂದವರನ್ನು ಮೂರು ವರ್ಗಗಳಲ್ಲಿ ಪ್ರತ್ಯೇಕಿಸಿ, ನಿಗಾ ಇಡಲಾಗುತ್ತದೆ. ಐಟಿ–ಬಿಟಿ ಉದ್ಯೋಗಿಗಳಲ್ಲಿ ಈ ಸೋಂಕಿನ ಶಂಕೆ ಹೆಚ್ಚುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಶಂಕಿತ ವ್ಯಕ್ತಿ ಸಾವು
* ವೈರಸ್ ಸೋಂಕಿನ ಶಂಕೆ: ಮಹಾರಾಷ್ಟ್ರದಲ್ಲಿ ವ್ಯಕ್ತಿ ಸಾವು
* ಕೋವಿಡ್: ಕೇಂದ್ರದಿಂದ ವಿಪತ್ತು ಎಂದು ಘೋಷಣೆ
* ಒಂದು ವಾರ ಮೃಗಾಲಯ, ಜೈವಿಕ ಉದ್ಯಾನ ಬಂದ್
* ಭಾನುವಾರ ಆರಂಭವಾಗಬೇಕಿದ್ದ ಆರ್ಎಸ್ಎಸ್ ಸಮಾವೇಶ ರದ್ದು
* ಅಂಗನವಾಡಿ ಮಕ್ಕಳ ಮನೆಗೇ ಧಾನ್ಯ
* ಇನ್ಫೊಸಿಸ್ ಸ್ಯಾಟಲೈಟ್ ಕಚೇರಿ ಶುಕ್ರವಾರ ರಾತ್ರಿ ಬಂದ್ ಆಗಿತ್ತು
* ಮೃತನ ಪುತ್ರನ ಸಂದರ್ಶನ ನಡೆಸಿದ ಕಲಬುರ್ಗಿಯ ಮೂವರುಪತ್ರಕರ್ತರು 14 ದಿನ ಮನೆ ಬಿಟ್ಟು ತೆರಳದಂತೆ ಸೂಚನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.