ಬೆಂಗಳೂರು:ಕೊರೊನಾ ಸೋಂಕಿತರಲ್ಲಿ ಮತ್ತೆ 98 ಮಂದಿ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್ಗೆ ಈವರೆಗೆ ಸಾವಿಗೀಡಾದವರ ಸಂಖ್ಯೆ 2,412ಕ್ಕೆ ತಲುಪಿದೆ.
ಹೊಸದಾಗಿ 5,172 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.29 ಲಕ್ಷ ದಾಟಿದೆ. ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ ಪರಿಣಾಮ ಕೇವಲ 48 ಗಂಟೆಗಳಲ್ಲಿ 10,655 ಮಂದಿ ಸೋಂಕಿತರಾಗಿರುವುದು ಬೆಳಕಿಗೆ ಬಂದಿದೆ. ಇದೇ ಅವಧಿಯಲ್ಲಿ 182 ಮಂದಿ ಮೃತಪಟ್ಟಿರುವುದು ಖಚಿತ ಪಟ್ಟಿದೆ. ಗುಣಮುಖರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ 1,683
ಸೇರಿದಂತೆ ರಾಜ್ಯದಲ್ಲಿ 3,860 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟು ಗುಣಮುಖರ ಸಂಖ್ಯೆ 53 ಸಾವಿರ ದಾಟಿದೆ.
ಬೆಂಗಳೂರಿನಲ್ಲಿ ಮತ್ತೆ 1,852ಮಂದಿ ಸೋಂಕಿತರಾಗಿದ್ದಾರೆ. ಮೈಸೂರಿನಲ್ಲಿ ಹೊಸದಾಗಿ 365ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಬಳ್ಳಾರಿ (269), ಕಲಬುರ್ಗಿ (219), ಬೆಳಗಾವಿ (219), ಧಾರವಾಡ (184), ಹಾಸನ(146), ದಕ್ಷಿಣ ಕನ್ನಡ (139), ಉಡುಪಿ (136), ಬಾಗಲಕೋಟೆ (134), ವಿಜಯಪುರ (129),ಶಿವಮೊಗ್ಗ (119), ರಾಯಚೂರು (109), ದಾವಣಗೆರೆ (108), ಕೊಪ್ಪಳ (107) ಜಿಲ್ಲೆಯಲ್ಲಿಯೂ ಹೊಸದಾಗಿ ಅಧಿಕ ಪ್ರಕರಣಗಳು ದೃಢಪಟ್ಟಿವೆ. ಶನಿವಾರ ಖಚಿತಪಟ್ಟ ಸಾವಿನ ಪ್ರಕರಣಗಳಲ್ಲಿ ಬೆಂಗಳೂರಿನ 27 ಮಂದಿ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.