ADVERTISEMENT

ಕೋವಿಡ್: 59 ಮಂದಿಯಲ್ಲಿ ಹೊಸ ತಳಿಯ ವೈರಾಣು ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 20:53 IST
Last Updated 16 ಜುಲೈ 2021, 20:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ 1,806 ಮಂದಿಗೆ ಕೊರೊನಾ ಸೋಂಕು ತಗಲಿರುವುದು ಶುಕ್ರವಾರ ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಹೊಸ ತಳಿಯ ಕೊರೊನಾ ವೈರಾಣುಗಳು 59 ಮಂದಿಯಲ್ಲಿ ಕಾಣಿಸಿಕೊಂಡಿದೆ.

ಆಲ್ಫಾ/ಬಿ.1.1.7 ವೈರಾಣು 19 ಮಂದಿಯಲ್ಲಿ ಹಾಗೂ ಕಪ್ಪಾ/ಬಿ.1.617.1 ವೈರಾಣು 40 ಮಂದಿಯಲ್ಲಿ ಹೊಸದಾಗಿ ಪತ್ತೆಯಾಗಿದೆ. ಕ್ರಮವಾಗಿ ರಾಜ್ಯದಲ್ಲಿ ಈ ವೈರಾಣು ಕಾಣಿಸಿಕೊಂಡ ಪ್ರಕರಣಗಳ ಒಟ್ಟು ಸಂಖ್ಯೆ 159 ಹಾಗೂ 185ಕ್ಕೆ ಏರಿಕೆಯಾಗಿದೆ. ಈವರೆಗೆ 725 ಡೆಲ್ಟಾ ಹಾಗೂ 3 ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸೋಂಕಿತರಲ್ಲಿ 42 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೂರು ತಿಂಗಳ ಅವಧಿಯಲ್ಲಿ ವರದಿಯಾದ ಕನಿಷ್ಠ ಮರಣ ಪ್ರಕರಣಗಳು ಇವಾಗಿವೆ. ರಾಜ್ಯದಲ್ಲಿ ಏಪ್ರಿಲ್ ಎರಡನೇ ವಾರದ ಬಳಿಕ ಮರಣ ಪ್ರಕರಣಗಳ ಸಂಖ್ಯೆ 50ರ ಗಡಿ ದಾಟಿ, ಬಳಿಕ 500ರ ಗಡಿ ತಲುಪಿತ್ತು. ಕಳೆದೊಂದು ತಿಂಗಳಿನಿಂದ ಮರಣ ಪ್ರಕರಣಗಳ ಸಂಖ್ಯೆ ಕೂಡ ಇಳಿಮುಖ ಮಾಡಿದೆ.

ADVERTISEMENT

ರಾಜ್ಯದ 15 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ದೃಢಪಟ್ಟಿವೆ. ಮರಣ ಪ್ರಮಾಣ ದರವು ಶೇ 2.32ರಷ್ಟು ವರದಿಯಾಗಿದೆ. ಬೆಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 10, ಮೈಸೂರಿನಲ್ಲಿ 5 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 5ಕ್ಕಿಂತ ಕಡಿಮೆಯಿದೆ. ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 36,079ಕ್ಕೆ ತಲುಪಿದೆ.

ಒಂದು ದಿನದ ಅವಧಿಯಲ್ಲಿ 1.52 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಶೇ 1.18ರಷ್ಟು ಸೋಂಕು ದೃಢ ಪ್ರಮಾಣ ವರದಿಯಾಗಿದೆ. ಬೆಂಗಳೂರಿನಲ್ಲಿ 411, ದಕ್ಷಿಣ ಕನ್ನಡದಲ್ಲಿ 225, ಮೈಸೂರಿನಲ್ಲಿ 174, ಹಾಸನದಲ್ಲಿ 138, ಶಿವಮೊಗ್ಗದಲ್ಲಿ 110 ಹಾಗೂ ಉಡುಪಿಯಲ್ಲಿ 105 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 100ರ ಗಡಿಯೊಳಗೆ ವರದಿಯಾಗಿವೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 28.80 ಲಕ್ಷ ದಾಟಿದೆ.

ಸೋಂಕಿತರಲ್ಲಿ 2,748 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 28.12 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, 31,399 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.