ADVERTISEMENT

ಕೋವಿಡ್–19 ಸೋಂಕಿತ ಇಬ್ಬರು ಸಂಪೂರ್ಣ ಚೇತರಿಕೆ- ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 14:10 IST
Last Updated 19 ಮಾರ್ಚ್ 2020, 14:10 IST
   

ಬೆಂಗಳೂರು:ಕೊರೊನಾ ಸೋಂಕಿತ ಇಬ್ಬರು ಸಂಪೂರ್ಣ ಚೇತರಿಸಿಕೊಂಡಿದ್ದು, ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪೂರ್ಣ ಗುಣಮುಖರಾಗಿ ಮನೆಗೆ ತೆರಳುವ ಅವರಿಬ್ಬರ ಬಗ್ಗೆ ಇನ್ನೂ 14 ದಿನ‌ ಮನೆಯಲ್ಲಿ ನಿಗಾ ವಹಿಸಲಾಗುವುದು ಎಂದರು.

ಸೋಂಕು ತಗಲಿದ್ದ ಎರಡನೇ ಮತ್ತು ಐದನೇ ವ್ಯಕ್ತಿ ಚೇತರಿಸಿಕೊಂಡವರು. ಆದರೂ ಮುಂದಿನ 24 ಗಂಟೆಗಳಲ್ಲಿ ಅವರಿಗೆ ಇನ್ನು ಎರಡು ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ADVERTISEMENT

ಇಷ್ಟು ದಿನ ವೈರಸ್ ನಿಂದ ಜನರು ಭಯ ಪಡುತ್ತಿದ್ದರು. ಸೋಂಕು ತಗುಲಿದರೆ ಏನು ಆಗುತ್ತೋ ಏನೋ ಎಂದು ಜನರು ಭಯಪಡುತ್ತಿದ್ದರು. ಇದೀಗ ಆ ಜನರ ಭಯ ಈ ಪ್ರಕರಣಗಳಿಂದ ದೂರ ಆಗಿದೆ. ಇನ್ನುಳಿದವರು ಕೂಡ ಶೀಘ್ರವೇ ಗುಣ ಮುಖರಾಗಲಿದ್ದಾರೆ. ಶುಕ್ರವಾರ ಕೂಡ ಗುಣ ಮುಖರಾದವರ ವಿಷಯವನ್ನು ತಿಳಿಸುತ್ತೇನೆ ಎಂದರು.

ಸೋಂಕು ನಿಯಂತ್ರಣಕ್ಜೆ ಸಂಬಂಧಿಸಿದಂತೆ ರಚಿಸಿರುವ ಉಪ ಸಮಿತಿ ಸಭೆ ನಡೆಸಿ, ಕೆಲವು ಕ್ರಮಗಳ ಬಗ್ಗೆ ತೀರ್ಮಾನಕ್ಕೆ ಬಂದಿದ್ದೇವೆ‌. ಮುಂದಿನ ಒಂದು ವಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ವಿಧಿ ವಿಧಾನಗಳ ಬಗ್ಗೆಯೂ ಕ್ರಮಕ್ಕೆ ಸೂಚಿಸಿದ್ದೇವೆ.

19 ವರ್ಷದ ಒಳಗೆ ಹಾಗೂ 65 ವರ್ಷದ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಲಾಗಿದೆ. ಅವರಿಗೆ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ ಇವರು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ತೀರ್ಮಾನ ಕೈಗೊಂಡಿದೆ. ಅದರಂತೆ ನಾವು ಕ್ರಮ ಕೈ ಗೊಂಡಿದ್ದೇವೆ.

ಪಬ್ ಮುಚ್ಚದೆ ಇದ್ದರೆ ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಲಾಗುವುದು. ಅಂಥ ಪಬ್ ಗಳ ಪರಾವನಗಿ ರದ್ದು ಮಾಡಲಾಗುವುದು. ಈ ಬಗ್ಗೆ ಗೃಹ ಸಚಿವ ಹಾಗೂ ಅಬಕಾರಿ ಸಚಿವರ ಜೊತೆ ಚರ್ಚೆ ಮಾಡಿದ್ದೇವೆ

ಬೆಂಗಳೂರಿನ ಎಲ್ಲ ಆಸ್ಪತ್ರೆ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವಂತೆ ಸೂಚಿಸಲಾಗಗಿದೆ. ಜಾತ್ರೆ, ಸಂತೆ , ಮದುವೆ, ನಿಶ್ಚಿತಾರ್ಥ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿ ತೀರ್ಮಾನ ಮಾಡಲಾಗಿದೆ. ಒಂದು ವೇಳೆ ಈ ಕಾರ್ಯಕ್ರಮಗಳು ಆಗಲೇಬೇಕು ಅಂದರೆ ‌100 ರಿಂದ 150೦ ಜನ ಸೇರಿ ಸಮಾರಂಭ ಮಾಡಲಿ. ದು ಬಿಟ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡೋದ್ರಿಂದ ಸಮಸ್ಯೆ ಆಗುತ್ತದೆ ಎಂದರು.

ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜಿನ ಹೌಸ್ ಸರ್ಜನ್ ಗಳನ್ನ ಕೋವಿದ್ 19 ಕ್ಕೆ ಒಂದು ತಿಂಗಳುಗಳ ಕಾಲ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಧಾರ್ಮಿಕ ಮುಂದಾಳುಗಳು, ಮೌಲ್ವಿಗಳು, ಫಾದರ್ ಗಳು ತಮ್ಮ ಅನುಯಾಯಿಗಳು ಪೂಜೆ ಪುನಸ್ಕಾರ ಮಾಡಬಾರದು ಎಂದು ಒಂದು ಸಾಲಿನ ನಿರ್ಣಯ ಘೋಷಣೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.

ಇನ್ಮುಂದೆ ಪಬ್, ಬಾರ್ ಗೆ ಭೇಟಿ ಕೊಟ್ಟು ಜನ ಸಂದಣಿ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ ಸುಧಾಕರ್, ಕೊರೊನಾ ಭೀತಿ ನಡುವೆಯೂ ಸುಳೇಭಾವಿ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ನಡೆದದ್ದು ಸರಿಯಲ್ಲ‌. ಈ ಬಗ್ಗೆ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದರು.

ಮನೆಯಲ್ಲಿ ಪ್ರತ್ಯೇಕವಾಗಿ ಇರುವವರ ಜವಾಬ್ದಾರಿ ಬೀಟ್ ಪೊಲೀಸರ ಹೆಗಲಿಗೆ

ಮನೆಯಲ್ಲಿ ಪ್ರತ್ಯೇಕವಾಗಿ ಇರುವವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಬೀಟ್ ಪೊಲೀಸರ ನೀಡಲಾಗಿದೆ. ಅವರು ತಪ್ಪಿಸಿಕೊಂಡ ಹೋಗದ ರೀತಿಯಲ್ಲಿ ಬೀಟ್ ಪೋಲೀಸರು ನೋಡಿಕೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.