ನಿಖಿಲ್ ಕುಮಾರಸ್ವಾಮಿ
ಕಲಬುರಗಿ: ‘ರಾಜ್ಯದಲ್ಲಿ ಅತಿವೃಷ್ಟಿಯಿಂದ 5 ಲಕ್ಷ ಹೆಕ್ಟೇರ್ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸ್ಪಂದಿಸಬೇಕಿದ್ದ ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಕುಳಿತು ವಿಡಿಯೊ ಸಂವಾದ ನಡೆಸಿದ್ದು ಬಿಟ್ಟರೇ ಬೇರೇನೂ ಮಾಡಿಲ್ಲ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಟೀಕಿಸಿದರು.
ವ್ಯಾಪಕ ಮಳೆಯಿಂದ ಆಗಿರುವ ಬೆಳೆ ಹಾನಿ ವೀಕ್ಷಣೆಗೆ ಕಲಬುರಗಿಗೆ ಸೋಮವಾರ ಭೇಟಿ ನೀಡಿರುವ ಅವರು ಕಲಬುರಗಿಯ ಎಪಿಎಂಸಿ ಮಾರುಕಟ್ಟೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಜ್ಯದಲ್ಲಿ ದೊಡ್ಡ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಮುಖ್ಯಮಂತ್ರಿ ವಿಡಿಯೊ ಸಂವಾದಕ್ಕೆ ಸೀಮಿತರಾಗಿದ್ದಾರೆ. ರಾಜ್ಯದ ಕೃಷಿ ಸಚಿವರಂತೂ ಅವರ ಮತಕ್ಷೇತ್ರ ಬಿಟ್ಟು ಹೊರಗೇ ಬಂದಿಲ್ಲ. ಕಲಬುರಗಿ ಜಿಲ್ಲೆಯನ್ನೇ ಮರೆತು ಬಿಟ್ಟಿದ್ದಾರೆ. ಅವರು ರಾಜ್ಯಕ್ಕೆ ಕೃಷಿ ಸಚಿವರೋ ಇಲ್ಲ ತಮ್ಮ ತಾಲ್ಲೂಕು, ಜಿಲ್ಲೆಗೆ ಸೀಮಿತವಾಗಿ ಕೆಲಸ ಮಾಡುತ್ತಿದ್ದಾರೇನೋ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಟೀಕಿಸಿದರು.
‘ಜಿಲ್ಲೆಯಲ್ಲಿ ಅಪಾರ ಬೆಳೆಹಾನಿಯಾಗಿದ್ದು, ಸಂಕಷ್ಟದಲ್ಲಿರುವ ರೈತರು ಉಳಿಯಬೇಕಾದರೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೈತರಿಗೆ ಕನಿಷ್ಠ ₹900 ಕೋಟಿಗಳಷ್ಟು ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.