ADVERTISEMENT

ಹಾಲಿನ ಬಾಕಿ ₹622 ಕೋಟಿ: ಸಂಕಷ್ಟದಲ್ಲಿ ಹೈನುಗಾರರು

ಬಿಡುಗಡೆಯಾಗದ ಪ್ರೋತ್ಸಾಹ ಧನ

ಖಲೀಲಅಹ್ಮದ ಶೇಖ
Published 30 ಡಿಸೆಂಬರ್ 2024, 0:00 IST
Last Updated 30 ಡಿಸೆಂಬರ್ 2024, 0:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪಾವತಿಸಬೇಕಾಗಿರುವ ಹಾಲಿನ ಪ್ರೋತ್ಸಾಹ ಧನದ ಬಾಕಿ ಮೊತ್ತ ಸುಮಾರು ₹622.54 ಕೋಟಿಗೆ ಏರಿದೆ. ಕಳೆದ ಜೂನ್‌ನಿಂದ ಪ್ರೋತ್ಸಾಹ ಧನ ಬಿಡುಗಡೆ ಆಗಿಲ್ಲ.

ರಾಜ್ಯದಲ್ಲಿ ದೊಡ್ಡ ಸಂಖ್ಯೆಯ ರೈತರು ಹಾಲು ಉತ್ಪಾದನೆಯನ್ನು ಉಪಕಸುಬನ್ನಾಗಿಸಿಕೊಂಡಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರು ಪ್ರೋತ್ಸಾಹ ಧನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. 

ADVERTISEMENT

ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ ಪೂರಕ ಅಂದಾಜು ಎರಡನೇ ಕಂತಿನಲ್ಲಿ 2024ರ ಆಗಸ್ಟ್‌ನಿಂದ 2025ರ ಫೆಬ್ರುವರಿವರೆಗೆ ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಪಾವತಿಸಲು ₹200 ಕೋಟಿ ವಿನಿಯೋಗಿಸುವುದಾಗಿ ಸರ್ಕಾರ ಹೇಳಿದೆ. 

ಹಾಲು ಉತ್ಪಾದಕರು ಸರಬರಾಜು ಮಾಡುವ ಪ್ರತಿ ಲೀಟರ್‌ ಹಾಲಿಗೆ ಸರ್ಕಾರ ₹5 ಪ್ರೋತ್ಸಾಹ ಧನ ನೀಡುತ್ತದೆ. ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ₹606.69 ಕೋಟಿ (ಜೂನ್‌– ಅಕ್ಟೋಬರ್) ಬಾಕಿ ಉಳಿಸಿಕೊಂಡಿದೆ. ಪರಿಶಿಷ್ಟ ಜಾತಿಯ ಹಾಲು ಉತ್ಪಾದಕರಿಗೆ ಅಕ್ಟೋಬರ್‌ ತಿಂಗಳ ₹6.85 ಕೋಟಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ₹9 ಕೋಟಿ ಹಾಲಿನ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿದೆ. 

ರಾಜ್ಯದಲ್ಲಿ 8 ಲಕ್ಷಕ್ಕಿಂತ ಹೆಚ್ಚು ಜನ ಸಾಮಾನ್ಯ ವರ್ಗದ ಹೈನುಗಾರರಿದ್ದಾರೆ. 50 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಹಾಲು ಉತ್ಪಾದಕರು ಹಾಗೂ ಪರಿಶಿಷ್ಟ ಪಂಗಡದ 31 ಸಾವಿರಕ್ಕೂ ಹೆಚ್ಚು ಮಂದಿ ಹಾಲು ಉತ್ಪಾದಕರು ಇದ್ದಾರೆ.

ಸರ್ಕಾರ ನೀಡುವ ಹಾಲಿನ ಪ್ರೋತ್ಸಾಹ ಧನಕ್ಕಾಗಿ ಹಾಲು ಉತ್ಪಾದಕರ ಸಂಘಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ ಎಂದು ರೈತರು ದೂರಿದ್ದಾರೆ.

‘ಪ್ರತಿ ತಿಂಗಳು ನಿಯಮಿತವಾಗಿ ಪ್ರೋತ್ಸಾಹ ಧನ ಬಿಡುಗಡೆ ಆಗುತ್ತಿಲ್ಲ. ಸಾಮಾನ್ಯವಾಗಿ ಮೂರ್ನಾಲ್ಕು ತಿಂಗಳಿಗೊಮ್ಮೆ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲಾಗುತ್ತಿದೆ. ಬರ, ಅತಿವೃಷ್ಟಿ ಸಂದರ್ಭದಲ್ಲೂ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಕೂಡಲೇ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನವನ್ನು ರೈತರಿಗೆ ಪಾವತಿಸಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಹಾಲು ಉತ್ಪಾದಕರಿಗೆ ಪಾವತಿಸಬೇಕಿದ್ದ ಬಾಕಿ ಪ್ರೋತ್ಸಾಹಧನವನ್ನು ಬಿಡುಗಡೆಗೊಳಿಸುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
–ಕೆ. ವೆಂಕಟೇಶ್‌, ಪಶುಸಂಗೋಪನೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.