ದಾವಣಗೆರೆ: ಜಮ್ಮು–ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ನೆರವಾಗಲು ಮಹಾನಗರ ಪಾಲಿಕೆಯ 41 ಸದಸ್ಯರು ತಮ್ಮ ಒಂದು ದಿನದ ಗೌರವಧನವನ್ನು ನೀಡಲು ಮೇಯರ್ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶಿವನಹಳ್ಳಿ ರಮೇಶ್, ‘ದೇಶಕ್ಕಾಗಿ ಮಡಿದ ವೀರ ಯೋಧರ ಕುಟುಂಬಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ 41 ಸದಸ್ಯರ ಒಂದು ತಿಂಗಳ ₹ 6000 ಗೌರವಧನ ಸೇರಿ ಒಟ್ಟು ₹ 2.46 ಲಕ್ಷವನ್ನು ಕೊಡುವ ಮೂಲಕ ನೈತಿಕ ಸ್ಥೈರ್ಯ ತುಂಬಬೇಕು’ ಎಂದು ಮನವಿ ಮಾಡಿದಾಗ ಉಳಿದ ಸದಸ್ಯರು ಮೇಜು ಬಡಿಯುವ ಮೂಲಕ ಒಪ್ಪಿಗೆ ಸೂಚಿಸಿದರು.
‘ದೇಶ ರಕ್ಷಣೆಗಾಗಿ ಹೋರಾಡುತ್ತಿರುವ ರಾಜ್ಯದ ಯಾವುದೇ ಭಾಗದ ಯೋಧರು ಹುತಾತ್ಮರಾದರೂ ಅವರ ಕುಟುಂಬಕ್ಕೆ ನೆರವಾಗಲು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮುಂದೆ ಬರಬೇಕು. ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಒಂದು ತಿಂಗಳ ಗೌರವಧನ ಅಂದಾಜು ₹ 3 ಕೋಟಿ ಆಗಲಿದೆ. ಹೀಗಾಗಿ ಆಯಾ ವರ್ಷದಲ್ಲಿ ಯೋಧರು ಹುತಾತ್ಮರಾದರೆ ಸದಸ್ಯರ ಒಂದು ತಿಂಗಳ ಗೌರವಧನವನ್ನು ಯೋಧರ ಕಟುಂಬಕ್ಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯಬೇಕು’ ಎಂದು ಶಿವನಹಳ್ಳಿ ರಮೇಶ್ ನೀಡಿದ ಸಲಹೆಗೂ ಸಭೆ ಅನುಮೋದನೆ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.