ADVERTISEMENT

ದೆಹಲಿ ಸ್ಫೋಟದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 8:11 IST
Last Updated 11 ನವೆಂಬರ್ 2025, 8:11 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಮೈಸೂರು: ‘ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರವೇ ಸಮಗ್ರ ತನಿಖೆ ನಡೆಸಿ ಉತ್ತರಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ‘ ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಸ್ಫೋಟಗಳು ಆಗುತ್ತಿವೆ ? ದೆಹಲಿ ಸ್ಫೋಟ ಮಂಗಳವಾರದ ಬಿಹಾರ ಚುನಾವಣೆ ವೇಳೆ ಪ್ರಭಾವ ಬೀರುತ್ತದೆಯೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಸ್ಫೋಟಗಳು ಆಗಬಾರದು. ಅದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ. ಚುನಾವಣೆ ವೇಳೆಯಲ್ಲೇ ಏಕೆ ಸ್ಫೋಟಗಳು ಹೆಚ್ಚು ಎಂಬ ಬಗ್ಗೆ ಕೇಂದ್ರವೇ ಉತ್ತರಿಸಬೇಕು. ಈ ಸ್ಫೋಟವು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯೇ ಹೆಚ್ಚು’ ಎಂದರು.

ADVERTISEMENT

15ರಂದು ದೆಹಲಿಗೆ

‘ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ನ. 15 ರಂದು ದೆಹಲಿಗೆ ಹೋಗುತ್ತಿದ್ದೇನೆ. ಅವತ್ತೇ ವಾಪಾಸ್ ಬರುವ ಅಂದಾಜಿದೆ. ರಾಹುಲ್‌ ಗಾಂಧಿ ಭೇಟಿಗೆ ಸಮಯ ಕೋರಿದ್ದು, ಅವಕಾಶ ಸಿಕ್ಕರೆ ಹೈಕಮಾಂಡ್‌ ಭೇಟಿಯಾಗುತ್ತೇನೆ’ ಎಂದರು.

ಭಾರತ ಹಿಂದೂ ರಾಷ್ಟ್ರ ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿಕೆಗೆ ಪ್ರತಿಕ್ರಿಯಿಸಿ ‘ಭಾರತ ಬಹುತ್ವದ ಸಂಸ್ಕೃತಿಯುಳ್ಳ ದೇಶ. ಎಲ್ಲ ಧರ್ಮೀಯರು ನಮ್ಮಲ್ಲಿ ಇದ್ದಾರೆ’ ಎಂದರು. ‘ ಆರ್‌ಎಸ್‌ಎಸ್‌ನವರು ಮೊದಲು ದೇಶದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಬಗ್ಗೆ ಮಾತನಾಡಲಿ’ ಎಂದು ಸಲಹೆ ನೀಡಿದರು.

ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್‌ನತ್ತ ವಾಲಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ಜಿ.ಟಿ. ದೇವೇಗೌಡ ಸೇರಿದಂತೆ ಯಾರನ್ನೂ ಪಕ್ಷಕ್ಕೆ ಆಹ್ವಾನಿಸುವುದಿಲ್ಲ. ಆದರೆ ಪಕ್ಷದ ಸಿದ್ದಾಂತ ಒಪ್ಪಿ ಬರುವವರಿಗೆ ಬೇಡ ಎನ್ನುವುದಿಲ್ಲ’ ಎಂದರು.

‘ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ತಡೆ ನೀಡಿಲ್ಲ. ನೀಡುವುದೂ ಇಲ್ಲ’ ಎಂದರು.

ದೆಹಲಿ ಸ್ಫೋಟಕ್ಕೂ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮೊಬೈಲ್‌ ಬಳಸುತ್ತಿದ್ದ ಉಗ್ರಗಾಮಿಗೂ ನಂಟು ಇರಬಹುದು. ಈ ಬಗ್ಗೆ ಎನ್‌ಐಎಯಿಂದ ಆಳವಾದ ತನಿಖೆ ನಡೆಸಬೇಕು.
– ಆರ್‌.ಅಶೋಕ, ವಿಧಾನಸಭೆ ವಿಪಕ್ಷ ನಾಯಕ
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಯವರು ದೆಹಲಿಯ ಸ್ಫೋಟ ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆ ಕೇಳುತ್ತಾರೆಯೇ?
– ಸಂತೋಷ್ ಲಾಡ್, ಕಾರ್ಮಿಕ ಸಚಿವ
ಪ್ರಿಯಾಂಕ್ ಖರ್ಗೆಗೆ ಇರೋದೇ ದುರ್ಬುದ್ಧಿ. ಆತ ಮೂರ್ಖ ಬೇರೆ. ಮೂರ್ಖ ಮತ್ತು ದುರ್ಬುದ್ಧಿ ಇರುವವರಿಗೆ ಬುದ್ಧಿ ಹೇಳಿದರೆ ಉಪಯೋಗ ಆಗದು. ಇಂತಹವರಿಗೆ ಯಾರೂ ಬುದ್ಧಿ ಹೇಳಲು ಆಗದು.
– ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯ
ಸ್ವತಂತ್ರ ಭಾರತದಲ್ಲಿ ಅತ್ಯಂತ ದುರ್ಬಲ ಗೃಹ ಸಚಿವರು ಇದ್ದರೆ, ಅದು ಅಮಿತ್ ಶಾ
– ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಕರ್ನಾಟಕದಲ್ಲಿ ಪ್ರತಿ ದಿನ ಒಂದಿಲ್ಲೊಂದು ರೀತಿ ಹಿಂಸಾಚಾರಗಳು ಆಗುತ್ತವೆ. ಅವುಗಳಲ್ಲಿ ಎಷ್ಟು ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಆಗಿರಬಾರದು.
– ಬಸವರಾಜ ಬೊಮ್ಮಾಯಿ, ಸಂಸದ
ದೆಹಲಿಯಲ್ಲಿ ಸಂಭವಿಸಿದ ಸ್ಫೋಟಕ್ಕೂ ಬಿಹಾರ ಚುನಾವಣೆಗೂ, ತಳುಕು ಹಾಕುವುದಿಲ್ಲ. ಇದು ಉಗ್ರರ ಕೃತ್ಯವೇ ಅಥವಾ ರಾಸಾಯನಿಕದಿಂದಾದ ಸ್ಫೋಟವೆ ಎಂಬುದು ತನಿಖೆಯಿಂದ ಮೊದಲು ದೃಢಪಡಬೇಕಿದೆ.
– ಎಂ.ಬಿ. ಪಾಟೀಲ, ಕೈಗಾರಿಕಾ ಸಚಿವ
ಬೆಂಕಿ ಬಿದ್ದಾಗಲೂ ಸಿದ್ದರಾಮಯ್ಯ ಅವರು ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆ?
– ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.